ಸಿದ್ದರಾಮಯ್ಯನವರು ಐಸಿಸ್‌ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಯತ್ನಾಳ್‌

ಸಿಎಂ ಸಿದ್ದರಾಮಯ್ಯನವರು ಐಸಿಸಿ ಭಯೋತ್ಪಾದಕರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಹತ್ವದ ಆರೋಪ ಮಾಡಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದ ಮುಂದೆ ಮಾತನಾಡಿದ್ದಲ್ಲದೇ ಟ್ವೀಟ್ ಕೂಡ ಮಾಡಿದ್ದು, “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗು ಮಧ್ಯ ಪ್ರಾಚ್ಯ ದೇಶಗಳ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ” ಎಂದು ಬರೆದು ನಾಲ್ಕು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಈ ಭಯೋತ್ಪಾದಕ ಬೆಂಬಲಿಗೆ ಹಿಂದೆಯೂ ಹಲವಾರು ಬಾರಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದ. ಕೆಲವೇ ದಿನಗಳಲ್ಲಿ ತನ್ವಿರ್ ಪೀರಾ ಎಂಬ ಭಯೋತ್ಪಾದಕ ಬೆಂಬಲಿಗನ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸುತ್ತೇನೆ. ಈತನು ಮಧ್ಯಪ್ರಾಚ್ಯ ದೇಶಗಳಿಂದ ಹಣವನ್ನು ಭಾರತಕ್ಕೆ ತರುವ ಹಾಗು ಭಾರತದ ಚಟುವಟಿಕಗಳ ಮಾಹಿತಿಯನ್ನು ಅರಬ್ ದೇಶಗಳಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾನೆ. ರಾಜ್ಯ ಪೊಲೀಸ್, ಕೇಂದ್ರೀಯ ತನಿಖಾ ಸಂಸ್ಥೆಗಳು ಈ ಕುರಿತು ವಿಚಾರಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಸರಣಿ ಟ್ವೀಟ್ ಮಾಡಿ ಹಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದನ್ನೆ ಹಲವಾರು ಮಾಧ್ಯಮಗಳು ದೊಡ್ಡ ಸುದ್ದಿ ಮಾಡಿವೆ.

ಫ್ಯಾಕ್ಟ್ ಚೆಕ್

ಈ ಕುರಿತು ಫ್ಯಾಕ್ಟ್ ಚೆಕ್ ನಡೆಸಿದಾಗಿ ಯತ್ನಾಳ್‌ ಐಸಿಸಿ ಬೆಂಬಲಿಗರೆಂದು ಆರೋಪಿಸಿರುವ ವ್ಯಕ್ತಿ ಬಿಜಾಪುರದ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಾಶ್ಮಿ ಎಂಬುವವರಾಗಿದ್ದು, ಅವರು ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಎಂಬ ಸಂಘಟನೆಯ ಅಧ್ಯಕ್ಷರಾಗಿದ್ದಾರೆ. ಅವರ ಫೇಸ್‌ಬುಕ್ ಪುಟವನ್ನು ಇಲ್ಲಿ ನೋಡಬಹುದು.

ಇನ್ನು ಅವರು ಭೇಟಿಯಾಗಿರುವ ವ್ಯಕ್ತಿ ಐಸಿಸಿ ಭಯೋತ್ಪಾದಕರಲ್ಲ. ಬದಲಿಗೆ ಇರಾಕ್ ದೇಶದ ಸೂಫಿ ಮಹೆಬೂಬ ಎ ಸುಭಾನಿ ಗೌಸ ಎ ಆಜಮ ದರ್ಗಾದ ಪೀಠಾದಿಪತಿ ಖಾಲೀದ ಜಿಲಾನಿ ಅವರ ಜೊತೆಗೆ ತೆಗೆದಂತಹ ಫೋಟೋಗಳು. ಈ ಚಿತ್ರಗಳನ್ನು 2013ರಲ್ಲಿಯೇ Qadri Al Hashmi Healing ಎಂಬ ಫೇಸ್‌ಬುಕ್ ಪುಟದಲ್ಲಿ ತನ್ವೀರ್ ಹಾಶ್ಮಿ ಬೆಂಬಲಿಗರು ಹಂಚಿಕೊಂಡಿದ್ದಾರೆ. ಸುನ್ನಿ ಜಮಾತ್‌ನ ಮುಖಂಡರಾಗಿರುವ ತನ್ವೀರ್‌ ಹಶ್ಮಿ ಅವರು ಸೂಫಿ ಪಂಗಡಕ್ಕೆ ಸೇರಿದವರು. ಈ ಚಿತ್ರದಲ್ಲಿರುವ ಬಾಗ್ದಾದಿನ ದರ್ಗಾದ ಪೀಠಾಧಿಪತಿ ಸಹ ಅದೇ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಯತ್ನಾಳ್ ಹಂಚಿಕೊಂಡ ಮತ್ತೊಂದು ಫೋಟೊದಲ್ಲಿರುವ ವ್ಯಕ್ತಿ ಖಾಲೀದ ಜಿಲಾನಿಯವರ ಅಂಗರಕ್ಷಕ. ಈ ಫೋಟೊ ಸಹ 2013ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಾಶ್ಮಿಯವರು ವಿದೇಶಕ್ಕೆ ಪ್ರಯಾಣ ಮಾಡಿದ ಎಲ್ಲಾ ವಿವರ ಮತ್ತು ಫೋಟೊಗಳನ್ನು ತಮ್ಮ www.alhashmi.org ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾರೆ. ಅವುಗಳನ್ನು ಇಲ್ಲಿ ನೋಡಬಹುದು.

ಬಿಜಾಪುರದ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಶ್ಮಿ ಎಂಬುವವರ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಅವರು ಸೂಫಿ ಪಂಥದವರು ಎಂದು ವಿಕಿಪೀಡಿಯಾ ತಿಳಿಸುತ್ತದೆ. ಹಲವು ಶಾಲಾ ಕಾಲೇಜುಗಳನ್ನು ನಡೆಸುವ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರು ಎಂದು ಬಿಜಾಪುರದ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಇನ್ನು ಅವರಿಗು ಐಸಿಸ್‌ಗೂ ಸಂಬಂಧವಿರುವ ಬಗ್ಗೆ ಯಾವುದೇ ದಾಖಲೆಗಳು ದೊರೆತಿಲ್ಲ. ಜೊತೆಗೆ ಅವರು 2022ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಸಹ ಭೇಟಿಯಾಗಿದ್ದಾರೆ.

ಎಡದಿಂದ ಎರಡನೇಯವರಾದ ತನ್ವೀರ್ ಹಶ್ಮಿಯವರು ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿರುವುದು.

ಇನ್ನು ಹುಬ್ಬಳ್ಳಿ ಕಾರ್ಯಕ್ರಮದ ಆಯೋಜಕರಾದ ಬಾಷಾ ಪೀರಾ ದರ್ಗಾದ ಧರ್ಮಗುರು ಸಯ್ಯದ್ ತಾಜುದ್ದೀನ್ ಖಾದ್ರಿಯವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, “ಮುಸ್ಲಿಂ ಧರ್ಮಗುರುಗಳ ಸಮಾವೇಶಕ್ಕೆ 150ಕ್ಕೂ ಸೂಫಿಗಳಿಗೆ ಆಹ್ವಾನ ನೀಡಲಾಗಿತ್ತು. 100ಕ್ಕೂ ಹೆಚ್ಚು ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಯಾರೊಬ್ಬರೂ ಐಸಿಸ್ ಉಗ್ರರ ಜೊತೆಗೆ ನಂಟು ಹೊಂದಿದ್ದವರು ಇರಲಿಲ್ಲ. ಅಂತಹ ಕೆಟ್ಟ ಕೆಲಸ ಮಾಡುವವವರನ್ನು ನಾವು ಜೊತೆಗಿಟ್ಟುಕೊಳ್ಳುವುದಿಲ್ಲ. ಈ ಬಗ್ಗೆ ಯಾವುದೇ ತನಿಖೆ ನಡೆಯಲಿ, ನಾವು ಸಹಕರಿಸುತ್ತೇವೆ” ಎಂದಿದ್ದಾರೆ.

ತನ್ವೀರ್ ಹಶ್ಮಿಯವರು ಮಾತನಾಡಿ, “ಭಯೋತ್ಪಾದಕರೊಂದಿಗೆ ನನ್ನ ಸಂಬಂಧ ಅಥವಾ ಹಣಕಾಸಿನ ಬಗ್ಗೆ ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧನಿದ್ದೇನೆ. ನಾನು ಮುಚ್ಚಿಡಲು ಏನೂ ಇಲ್ಲ. ಎಂಟು ದಿನಗಳಲ್ಲಿ ಭಯೋತ್ಪಾದಕ ಸಂಘಟನೆಯೊಂದಿಗಿನ ನನ್ನ ಸಂಪರ್ಕ ಬಗ್ಗೆ ಸಾಬೀತುಪಡಿಸುವಂತೆ ನಾನು ಯತ್ನಾಳ್ ಅವರಿಗೆ ಸವಾಲು ಹಾಕುತ್ತೇನೆ. ತನ್ನ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದರೆ ಪಾಕಿಸ್ತಾನಕ್ಕೆ ಹೋಗುತ್ತಾರೆಯೇ?” ಇದು ನನ್ನ ಸವಾಲು ಎಂದಿದ್ದಾರೆ.

“ನಾನು ಪ್ರಪಂಚದಾದ್ಯಂತ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದೇನೆ ಮತ್ತು ಖಂಡಿಸುತ್ತಿದ್ದೇನೆ. ಯತ್ನಾಳ್ ಮಾಡುತ್ತಿರುವ ಆರೋಪಗಳು ಆಧಾರರಹಿತ ಮತ್ತು ಅಸಂಬದ್ಧ. ಭಯೋತ್ಪಾದಕರೊಂದಿಗಿನ ನನ್ನ ಭೇಟಿ ಎಂದು ನನ್ನದೇ ಫೇಸ್‌ಬುಕ್‌ನಲ್ಲಿನ ಫೋಟೋಗಳನ್ನು ಲಗತ್ತಿಸಿರುವುದು ತಮಾಷೆಯಾಗಿದೆ. ಇದು 2013 ರಲ್ಲಿ ನಾನು ಇರಾಕ್‌ಗೆ ಭೇಟಿ ನೀಡಿದಾಗಿನಿಂದ ಒಂದು ಮಸೀದಿಯದ್ದು. ಅದರಲ್ಲಿ ಇರಾಕ್ ಸರ್ಕಾರದ ಅಧಿಕಾರಿಗಳು ಮತ್ತು ಮಸೀದಿಯ ಮೌಲ್ವಿಗಳು ಫೋಟೋದಲ್ಲಿದ್ದಾರೆಯೇ ಹೊರತು ಭಯೋತ್ಪಾದಕರಲ್ಲ” ಎಂದಿದ್ದಾರೆ.

ತನ್ವೀರ್‌ ಹಶ್ಮಿಯವರು ಕಾಂಗ್ರೆಸ್ ಬೆಂಬಲಿಗರೂ ಆಗಿದ್ದು, ಹಲವಾರು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ್ದಲ್ಲದೇ ಈ ಚುನಾವಣೆಯಲ್ಲಿ ಬಿಜಾಪುರದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಿದ್ದರು. ಹಾಗಾಗಿ ಅವರ ಮೇಲಿನ ವಯಕ್ತಿಕ ದ್ವೇಷದಿಂದ ಯತ್ನಾಳ್ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾರೆ.


ಇದನ್ನೂ ಓದಿ; ಕ್ಯಾ. ಪ್ರಾಂಜಲ್ ಕುರಿತು ಸಿಎಂ ಸಿದ್ದರಾಮಯ್ಯನವರ ಅರ್ಧ ಹೇಳಿಕೆ ಹಂಚಿ ತಪ್ಪಾಗಿ ಅರ್ಥೈಸಿದ ಸಂಸದ ತೇಜಸ್ವಿ ಸೂರ್ಯ


ಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *