Fact Check | ಎಎಪಿ ನಾಯಕ ಅವಧ್ ಓಜಾ ಅವರು ಮನೀಶ್ ಸಿಸೋಡಿಯಾ ಅವರನ್ನು ಹೇಡಿ ಎಂದು ಕರೆದಿದ್ದಾರೆ ಎಂಬುದು ಸುಳ್ಳು

ಆಮ್ ಆದ್ಮಿ ಪಕ್ಷದ ನಾಯಕ ಅವಧ್‌ ಓಜಾ ಅವರು ಮುಂಬರುವ ದೆಹಲಿ ರಾಜ್ಯ ಚುನಾವಣೆಯಲ್ಲಿ ಪಟ್ಟರ್ಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸದಿದ್ದಕ್ಕಾಗಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರನ್ನು ಹೇಡಿ ಎಂದು ಕರೆದಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಡಲಾಗುತ್ತಿದೆ. ಈ ವಿಡಿಯೋವನ್ನು ಗಮನಿಸಿದ ಸಾಕಷ್ಟು ಮಂದಿ ಆಮ್‌ ಆದ್ಮಿ ಪಕ್ಷದ ತನ್ನ ಆಂತರಿಕ ಕಲಹದ ಕಾರಣದಿಂದಾಗಿ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ.

ಇದೇ ವಿಡಿಯೋವನ್ನು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಹಲವರು ಈ ವೈರಲ್ ವಿಡಿಯೋವನ್ನು ನಿಜವೆಂದು ಭಾವಿಸಿ, ಆಮ್‌ ಆದ್ಮಿ ಪಕ್ಷದಲ್ಲಿ ಇತ್ತೀಚೆಗೆ ಕಲಹ ಹೆಚ್ಚಾಗಿದೆ ಎಂದು ಬರೆದುಕೊಂಡು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಪೋಸ್ಟ್‌ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವ ಪೋಸ್ಟ್‌ನ ಹಿನ್ನೆಲೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ಪೋಸ್ಟ್ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಎನ್‌ಡಿಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 8 ಜನವರಿ 2025 ರಂದು ಅಪ್ಲೋಡ್ ಮಾಡಲಾದ ಪೂರ್ಣ ಆವೃತ್ತಿಯ ಮೂಲ ವಿಡಿಯೋ ಪತ್ತೆಯಾಗಿದೆ.

ಈ ವಿಡಿಯೋವಿನ ಸಂಪೂರ್ಣ ಆವೃತ್ತಿಯನ್ನು ಪರಿಶೀಲನೆ ನಡೆಸಿದಾಗ, ಇದರಲ್ಲಿ ಎಲ್ಲಿಯೂ ಕೂಡ ಅವಧ್‌ ಓಜಾ ಅವರು ಮನೀಷ್‌ ಸಿಸೋಡಿಯ ಅವರನ್ನು ಹೇಡಿ ಎಂದು ಕರೆದಿರುವ ಕುರಿತು ಕಂಡುಬಂದಿಲ್ಲ. ಇನ್ನು ಈ ಕುರಿತು ಬೇರೆ ಯಾವುದಾದರೂ ಮಾಧ್ಯಮಗಳು ವರದಿಯನ್ನು ಮಾಡಿವೆಯೇ ಎಂದು ಪರಿಶೀಲನೆ ನಡೆಸಿದಾಗ ಆ ರೀತಿಯ ಯಾವುದೇ ಅಧಿಕೃತ ವರದಿಗಳು ಕಂಡುಬಂದಿಲ್ಲ. ಒಂದು ವೇಳೆ ಈ ಹೇಳಿಕೆ ನಿಜವಾಗಿದ್ದಲ್ಲಿ ಇದು ಬಹುದೊಡ್ಡ ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಅಂತಹ ಬೆಳವಣಿಗೆಗಳು ಕೂಡ ಕಂಡುಬಂದಿಲ್ಲ. ಹೀಗಾಗಿ ವೈರಲ್ ಪೋಸ್ಟ್ ದಾರಿ ತಪ್ಪಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯ ಅವರನ್ನು ಆಮ್‌ ಆದ್ಮಿ ಪಕ್ಷದ ನಾಯಕ ಅವಧ್‌ ಓಜಾ ಅವರು ದೆಹಲಿಯ ಪಟ್ಟರ್ಗಂಜ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಇಚ್ಚೀಸದ ಕಾರಣ ಅವರನ್ನು ಹೇಡಿ ಎಂದು ಕರೆದಿದ್ದಾರೆ ಎಂಬುದು ಸುಳ್ಳಾಗಿದೆ. ವೈರಲ್ ವಿಡಿಯೋ ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಈ ಸುದ್ದಿಯನ್ನು ಯಾವುದೇ ಕಾರಣಕ್ಕೂ ಶೇರ್‌ ಮಾಡಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check | “ಭಾರತ ಮಾತೆ” ಎಂಬುದು ಅಸಂಸದೀಯ ಪದ ಎಂದು ರಾಹುಲ್‌ ಗಾಂಧಿ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *