“ತೆಲಂಗಾಣದಲ್ಲಿ ಕಾಂಗ್ರೆಸ್ ವಿಜಯದ ನಂತರ ಮೆರವಣಿಗೆಯಲ್ಲಿ ಕೆಲವರು ತ್ರಿವರ್ಣ ಧ್ವಜದ ಮೇಲೆ ಅಶೋಕ ಚಕ್ರವನ್ನು ತೆಗೆದು ಇಸ್ಲಾಮಿಕ್ ನುಡಿಗಟ್ಟುಗಳು (ಕಲ್ಮಾ) ಬರೆದಿರುವ ಧ್ವಜವನ್ನು ಹಿಡಿದಿದ್ದಾರೆ. ಇದು ಕಾಂಗ್ರೆಸ್ನ ದೇಶದ್ರೋಹ ನಡೆಗೆ ಸಾಕ್ಷಿ..!” ಎಂಬ ಪೋಸ್ಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಳ್ಳು ಬರಹದೊಂದಿಗೆ ಹಂಚಿಕೊಳ್ಳಲಾಗಿರುವ ಹಳೆಯ ವಿಡಿಯೋ
ತೆಲಂಗಾಣದಲ್ಲಿ ಕಾಂಗ್ರೆಸ್ ದಿಗ್ವಿಜಯದ ನಂತರ ಹಲವು ರೀತಿಯಾದ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹಬ್ಬೋದಕ್ಕೆ ಪ್ರಾರಂಭವಾಗಿದೆ. ಇದರಿಂದ ತೆಲಂಗಾಣದ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಪ್ರಯತ್ನಿಸಲಾಗುತ್ತಿದೆ. ಆದರೆ ಈ ಸುಳ್ಳುಗಳು ಕೂಡ ಸತ್ಯ ಶೋಧನೆಗಳಿಂದ ಬಹಿರಂಗ ಗೊಳ್ಳುತ್ತಿದೆ. ಅದೇ ರೀತಿಯಲ್ಲಿ ಈಗ ತ್ರಿವರ್ಣ ಧ್ವಜಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯೊಂದು ಹಬ್ಬುತ್ತಿದೆ.
ಫ್ಯಾಕ್ಟ್ಚೆಕ್
ಈ ವಿಚಾರದ ಕುರಿತು ಫ್ಯಾಕ್ಟ್ಚೆಕ್ ನಡೆಸಿದಾಗ ವೈರಲ್ ಆಗಿರುವ ವಿಡಿಯೋ ಜುಲೈ 2022 ರಲ್ಲಿ ತೆಲಂಗಾಣದ ಮಹೆಬೂಬ್ನಗರದಲ್ಲಿ ಮುಸ್ಲಿಂ ಸಮುದಾಯ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದ್ದಾಗಿದೆ. ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾಡಿದ ಟೀಕೆಗಳಿಗೆ ಸಂಬಂಧಿಸಿದ ಪ್ರತಿಭಟನೆಯಲ್ಲಿ ಈ ಧ್ವಜ ಕಂಡುಬಂದಿದೆ.
ಆ ಸಮಯದಲ್ಲಿ ಈ ವಿಡಿಯೋ ತುಣುಕಿನ ಕುರಿತು ವಿವಿಧ ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು. ಈ ಯಾವುದೇ ವರದಿಗಳಲ್ಲಿ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಬೆಂಬಲವಿರುವ ಬಗ್ಗೆಯೂ ಉಲ್ಲೇಖವಿಲ್ಲ. ಇನ್ನು ಮುಖ್ಯವಾಗಿ, ಈ ವೀಡಿಯೊ ಇತ್ತೀಚೆಗೆ ಮುಕ್ತಾಯಗೊಂಡ ತೆಲಂಗಾಣ ಚುನಾವಣೆಗೆ ಸಂಬಂಧಿಸಿಲ್ಲ ಎಂದು ಫ್ಯಾಕ್ಟ್ಲೀ ವರದಿ ಮಾಡಿದೆ. ಹಾಗಾಗಿ ವೈರಲ್ ವಿಡಿಯೋದಲ್ಲಿ ಮಾಡಿರುವ ಅಪಾದನೆ ಸುಳ್ಳಾಗಿದೆ.
ಇದನ್ನೂ ಓದಿ : Fact Check | ಪೊಲೀಸರು ಮಹುವಾರನ್ನು ಲೋಕಸಭೆಯಿಂದ ಎಳೆದೊಯ್ದಿದ್ದಾರೆ ಎಂಬುದು ಸುಳ್ಳು ..!
ವಿಡಿಯೋ ನೋಡಿ : ಅಜಿತ್ ಹನುಮಕ್ಕನವರ್ ಹೇಳಿದ್ದು ಸುಳ್ಳು: ಟಿಪ್ಪು ಖಡ್ಗದ ಮೇಲೆ ‘ಕಾಫೀರರ ಮೇಲೆ ಸಿಡಿಲಿನಂತೆ ಎರಗುವ ಖಡ್ಗ’ ಎಂದು ಬರೆದಿಲ್ಲ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ