Fact Check: ಹಿಂದೂಗಳ ಅಗತ್ಯವಿಲ್ಲವೆಂದು ಸಿಎಂ ಸಿದ್ದರಾಮಯ್ಯನವರು ಹೇಳಿಲ್ಲ. ಈ ಪತ್ರಿಕಾ ವರದಿ ನಿಜವಲ್ಲ

ಲೋಕಸಭಾ ಚುನಾವಣೆಗಳಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಈ ಹೊತ್ತಿನಲ್ಲಿ ತಮ್ಮ ಎದುರಾಳಿಗಳನ್ನು ಮಣಿಸುವ ಸಲುವಾಗಿ ನಕಲಿ ವರದಿಗಳನ್ನು, ಹೇಳಿಕೆಗಳನ್ನು ಸೃಷ್ಟಿಸಲಾಗುತ್ತಿದೆ. ಅದೇ ರೀತಿ ಈಗ, “ಹಿಂದೂಗಳ ಅಗತ್ಯ ನಮಗೆ ಬೇಡ. ಮುಸ್ಲಿಮರ ಓಟು ಸಾಕು‌. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ. ಮುಸ್ಲಿಂರ ಓಲೈಕೆ ಕುರಿತು ಬಿಜೆಪಿಗರ ಟೀಕೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.” ಎಂದು ಸಿಎಂ ಸಿದ್ದರಾಮಯ್ಯ ಖಾಸಗಿ ಹೋಟೇಲ್ ಒಂದರಲ್ಲಿ ನಡೆದ ಹೋಬಳಿ ಮಟ್ಟದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಹೇಳಿದ್ದಾರೆ ಎನ್ನುವ ಪತ್ರಿಕಾ ಹೇಳಿಕೆ ರೀತಿಯ ಪೋಸ್ಟರ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: ಈ ಕುರಿತು ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹೇಳಿಕೆ ನೀಡಿರುವ ಕುರಿತು ಯಾವ ಪತ್ರಿಕೆಗಳಲ್ಲಿಯೂ ವರದಿಯಾಗಿಲ್ಲ. ಒಂದು ವೇಳೆ ಸಿದ್ದರಾಮಯ್ಯನವರು ಈ ರೀತಿ ಹೇಳಿಕೆ ನೀಡಿದ್ದರೆ ಅದು ಎಲ್ಲಾ ಮುಖ್ಯವಾಹಿನಿ ಮಾಧ್ಯಮಗಳಲ್ಲಿಯೂ ವ್ಯಾಪಕವಾಗಿ ವರದಿಯಾಗಬೇಕಿತ್ತು. ಆದರೆ ಅಂತಹ ಯಾವುದೇ ವರದಿಗಳು ಸಿಕ್ಕಿಲ್ಲ. ಬದಲಾಗಿ, ಬಿಜೆಪಿ ನಾಯಕರು “ಕಾಂಗ್ರೆಸ್ ಅಥವಾ ಸಿದ್ದರಾಮಯ್ಯನವರು ಹಿಂದುಗಳ ಮತ ಬೇಡ ಎನ್ನಲಿ” ಎಂದು ಸವಾಲು ಹಾಕಿರುವ ಸುದ್ದಿಗಳಷ್ಟೇ ಅಂತರ್ಜಾಲದಲ್ಲಿ ಲಭ್ಯವಾಗಿವೆ.

ಇನ್ನು ಮೇಲಿನ ಪೋಸ್ಟ್‌ನಲ್ಲಿ ಬಳಸಲಾದ ಪೋಟೊವನ್ನು ಸ್ಕ್ರೀನ್‌ ಶಾಟ್ ತೆಗೆದು ಹುಡುಕಿದಾಗ ಜೂನ್ 02, 2023ರಂದು ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯನವರು 5 ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರು ಎಂದು ಇದೇ ಫೋಟೊವನ್ನು ಪಬ್ಲಿಕ್ ಟಿವಿ ತನ್ನ ವರದಿಯಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ಈ ಕುರಿತು ಅದೇ ದಿನ ಅಂದರೆ ಜೂನ್ 02, 2023ರಂದು ವಾರ್ತಾಭಾರತಿ ಪತ್ರಿಕೆ ಕೂಡ ಸಚಿವ ಸಂಪುಟದ ಸಭೆಗೂ ಮುನ್ನ ಅಧಿಕಾರಿಗಳೊಂದಿಗೆ ಚರ್ಚೆ ಎಂದು ಅದೇ ಫೋಟೊವನ್ನು ಪ್ರಕಟಿಸಿ ವರದಿ ಮಾಡಿರುವುದು ಕಂಡು ಬಂದಿದೆ. ಅದನ್ನು  ಇಲ್ಲಿ ನೋಡಬಹುದು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಿರಿಯ ಅಧಿಕಾರಿಗಳಾದ ರಜನೀಶ್ ಗೋಯೆಲ್, ಐಎನ್ ಎಸ್ ಪ್ರಸಾದ್, ಎಲ್.ಕೆ.ಅತೀಕ್ ಸೇರಿದಂತೆ ಇನ್ನಿತರರು ಹಾಜರಿದ್ದ ಸಭೆಯ ಫೋಟೊವನ್ನು ತೆಗೆದುಕೊಂಡು ಸಿದ್ದರಾಮಯ್ಯನವರು ಹೋಬಳಿ ಮಟ್ಟದ ಕಾರ್ಯಕರ್ತರ ಸಭೆ ನಡೆಸಿದ್ದಾರೆ ಎಂದು ರಾಜಕೀಯ ವಿರೋಧಿಗಳು ನಕಲಿ ಪತ್ರಿಕಾ ವರದಿಯನ್ನು ಸೃಷ್ಟಿಸಲಾಗಿದೆ ಎಂದು ಖಚಿತವಾಗಿ ಹೇಳಬಹುದು. ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ರೀತಿ ನಕಲಿ ಸುದ್ದಿಯನ್ನು ಸೃಷ್ಟಿಸಲಾಗಿದೆ.

ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಸಿಎಂ ಸಿದ್ದರಾಮಯ್ಯನವರು “ಬಿಜೆಪಿ – ಜೆಡಿಎಸ್‌ ಮಿತ್ರಮಂಡಳಿ ಕೃಪಾಪೋಷಿತ ಕಿಡಿಗೇಡಿಗಳು ವಾರ್ತಾಪತ್ರಿಕೆಯನ್ನು ಹೋಲುವ ಸುಳ್ಳು ಸುದ್ದಿಯ ತುಣುಕೊಂದನ್ನು ಸೃಷ್ಟಿಸಿ, ಅದರಲ್ಲಿ ಜನರ ಕೋಮುಭಾವನೆ ಕೆರಳಿಸುವ ಸುದ್ದಿಯನ್ನು ತುಂಬಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದೇನೆ. ಇದರ ಹಿಂದಿರುವ ದುಷ್ಟ ಶಕ್ತಿ ಯಾರು ಎಂಬ ಬಗ್ಗೆ ನಮಗೆ ಮಾಹಿತಿ ಇದ್ದು, ಆದಷ್ಟು ಬೇಗನೆ ಅವರನ್ನು ನ್ಯಾಯದ ಕೈಗಳಿಗೆ ಒಪ್ಪಿಸಲಾಗುವುದು” ಎಂದಿದ್ದಾರೆ.

ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕ ಬಿ. ಎಲ್ ಸಂತೋಷ್ ಅವರು “ನಮಗೆ ಲಿಂಗಾಯತ ಮತಗಳ ಅಗತ್ಯವಿಲ್ಲ” ಎಂದು ಹೇಳಿದ್ದಾರೆ ಎಂಬ ನಕಲಿ ಸುದ್ದಿಯೊಂದನ್ನು ಹರಿಬಿಡಲಾಗಿತ್ತು. ನಂತರ ಈ ಸುಳ್ಳು ವರದಿ ವಿರುದ್ಧ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳೆದ ವರ್ಷ ವೈರಲ್ ಆಗಿದ್ದ ಫೇಕ್ ನ್ಯೂಸ್

ಈಗ ಅದೇ ಮಾದರಿಯಲ್ಲಿ ಈ ನಕಲಿ ಸುದ್ದಿಯನ್ನು ಸಹ ಹರಿಬಿಡಲಾಗಿದೆ. ಕಳೆದ ವರ್ಷದ ನಕಲಿ ಪತ್ರಿಕಾ ವರದಿಯಲ್ಲಿ ಎಲ್ಲಿ ಬಿ.ಎಲ್ ಸಂತೋಷ್ ಹೆಸರಿದೆಯೋ ಅಲ್ಲಿ ಸಿದ್ದರಾಮಯ್ಯನವರ ಹೆಸರು ಮತ್ತು ಲಿಂಗಾಯಿತರ ಬದಲು ಹಿಂದೂ ಎಂದು ಸೇರಿಸಿ ಈ ನಕಲಿ ಫೋಟೊವನ್ನು  ಹಂಚಿಕೊಳ್ಳಲಾಗಿದೆ.


ಇದನ್ನು ಓದಿ: Fact Check: ಪ್ರಾದೇಶಿಕ ಸ್ಥಿರತೆಯ ಕಾರಣಕ್ಕಾಗಿ 1950ರಲ್ಲೇ ಗ್ವಾದರ್ ಬಂದರನ್ನು ಕೊಳ್ಳಲು ಭಾರತ ನಿರಾಕರಿಸಿತು


ವಿಡಿಯೋ ನೋಡಿ: ಬಸ್ ದಾಳಿಯ ವಿಡಿಯೋ ಗುಜರಾತ್ ನಲ್ಲಿ ನಡೆದಿರುವುದು. ಕರ್ನಾಟಕಕ್ಕೆ ಸಂಬಂಧವಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *