Fact Check | ಆಪ್‌ ಪಕ್ಷದ ನಾಯಕಿ ಅತಿಶಿ ಜೈ ಶ್ರೀರಾಮ್‌ ಘೋಷಣೆ ಕೂಗಿ, ಮುಸಲ್ಮಾನರ ಒತ್ತಾಯದ ಮೇರೆಗೆ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು

“ಆಮ್ ಆದ್ಮಿ ಪಕ್ಷದ ನಾಯಕಿ ಅತಿಶಿ ಮೇಡಂ ಶ್ರೀರಾಮ್ ಕಾಲೊನಿ ದೆಹಲಿಯಲ್ಲಿ ಭಾಷಣ ಮಾಡುವಾಗ ತಪ್ಪಾಗಿ ಜೈ ಶ್ರೀ ರಾಮ್ ಹೇಳಿದಾಗ ಅಲ್ಲಿಯ ಬಹುಸಂಖ್ಯಾತ ಮುಸ್ಲಿಂ ಜನರು ವಿರೋಧ ಮಾಡಿದ ಮೇಲೆ ಅವರು ಕ್ಷಮೆ ಕೇಳಿ ಭಾಷಣ ಮುಂದುವರಿಸಿದರು” ಎಂದು ಮುಸಲ್ಮಾನ ಸಮುದಾಯದ ವಿರುದ್ಧ ಸುಳ್ಳು ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ದೆಹಲಿಯ ಶಿಕ್ಷಣ ಸಚಿವೆ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅತಿಶಿ ಅವರು ಶಾಲಾ ಉದ್ಘಾಟನೆಯ ಸಮಯದಲ್ಲಿ ಮಾಡಿದ ಭಾಷಣದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ವಿಡಿಯೋದಲ್ಲಿ ಕೂಡ ಕೆಲವು ಗೊಂದಲಗಳಿರುವುದು ಮತ್ತು ಜನರು  ಎನ್ನನ್ನೋ ಗಂಭೀರವಾಗಿ ಚರ್ಚಿಸುವುದನ್ನು ಕೂಡ ಕಾಣಬಹುದಾಗಿದೆ. ಆದರೆ ಈ ಬಗ್ಗೆ ಸರಿಯಾದ ಮಾಹಿತಿಯನ್ನ ಪಡೆಯದೆ ಸುಳ್ಳು ಮಾಹಿತಿಯನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ

ಫ್ಯಾಕ್ಟ್‌ಚೆಕ್‌

ಈ ಕುರಿತು ವಿವಿಧ ಕೀ ವರ್ಡ್‌ಗಳನ್ನು ಬಳಸಿ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹುಡುಕಾಟವನ್ನು ನಡೆಸಿದಾಗ ದಿನಾಂಕ 9 ಮಾರ್ಚ್‌ 2024ರಂದು ಆಮ್‌ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ್ದ ಅಧಿಕೃತ ಪತ್ರಿಕಾ ಹೇಳಿಕೆಯೊಂದು ಪತ್ತೆಯಾಗಿದೆ. ಅದರಲ್ಲಿ ಈಶಾನ್ಯ ದೆಹಲಿಯ ಶ್ರೀರಾಮ್ ಕಾಲೋನಿಯಲ್ಲಿ ಕೇಜ್ರಿವಾಲ್ ಸರ್ಕಾರ ಎರಡು ಸರ್ಕಾರಿ ಶಾಲೆಗಳನ್ನು ಉದ್ಘಾಟಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಅತಿಶಿ ಮಾತನಾಡಿ, ಶ್ರೀರಾಮ ಕಾಲೋನಿಯ ಈ ಶಾಲೆಯು ದೆಹಲಿಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂದಿದ್ದರು ಎಂಬ ಅಂಶವನ್ನು ಕೂಡ ಅದರಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮತ್ತಷ್ಟು ಹುಡುಕಿದಾಗ Directorate of Education GNCT of Delhi ಎಂಬ ಯುಟ್ಯುಬ್‌ ಚಾನಲ್‌ ನಲ್ಲಿ ದಿನಾಂಕ 9 ಮಾರ್ಚ್‌ 2024 ರಂದು ಹಂಚಿಕೊಳ್ಳಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದ 32:14 ಟೈಮ್‌ಸ್ಟ್ಯಾಂಪ್‌ನಲ್ಲಿ ಅತಿಶಿ ಅವರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಮತ್ತು ಇಂಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆಗಳೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿರುವುದು ಕಂಡು ಬಂದಿದೆ.

ನಂತರ 40:30 ಟೈಮ್‌ಸ್ಟ್ಯಾಂಪ್‌ನಲ್ಲಿ, ಅತಿಶಿ ಖಜೂರಿ ಖಾಸ್ ಶಾಲೆಯ ಉದ್ಘಾಟನೆಯ ಬಗ್ಗೆ ತಮ್ಮ ಭಾಷಣವನ್ನು ಮುಂದುವರೆಸುತ್ತಿದ್ದರು. ಈ ವೇಳೆ ಭಾಷಣದಲ್ಲಿ, ಅತಿಶಿ ಖಜೂರಿ ಖಾಸ್ ಶಾಲೆಯ ಬಗ್ಗೆ ಪ್ರಸ್ತಾಪಿಸಿದಾಗ ಕೆಲವು ಹಾಜರಿದ್ದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅತಿಶಿ ಅಕ್ಷೇಪ ವ್ಯಕ್ತ ಪಡಿಸಿದವರನ್ನು ಕುಳಿತುಕೊಳ್ಳಲು ವಿನಂತಿಸಿದಾಗ, ನಗರಸಭಾ ಸದಸ್ಯ ಮೊಹಮ್ಮದ್ ಅಮಿಲ್ ಮಲಿಕ್ ವೇದಿಕೆಯ ಹಿಂದಿನಿಂದ ಅತಿಶಿಯ ಬಳಿಗೆ ಬಂದು, “ಇದು ಶ್ರೀರಾಮ ಕಾಲೋನಿಯ ಶಾಲೆ, ಶ್ರೀರಾಮ ಕಾಲೋನಿ ಎಂದು ಹೇಳಿ” ಎಂಬ ಸಲಹೆಯನ್ನು ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಅತಿಶಿ ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆಯಾಚಿಸುತ್ತಾ, “ನಾನು ಶ್ರೀರಾಮ್ ಕಾಲೋನಿಯ ನಿವಾಸಿಗಳಿಗೆ ಕ್ಷಮೆ ಕೇಳಲು ಬಯಸುತ್ತೇನೆ; ಶ್ರೀರಾಮ್ ಕಾಲೋನಿಯ ಶಾಲೆ, ಖಜೂರಿ ಖಾಸ್, ಕರವಾಲ್ ನಗರ ಮತ್ತು ಸೋನಿಯಾ ವಿಹಾರ್‌ನ ಮಕ್ಕಳೂ ಇಲ್ಲಿ ಕಲಿಯುತ್ತಾರೆ ಎಂದು ಸ್ಥಳದ ಹೆಸರನ್ನು ಕೂಡ ಉಲ್ಲೇಖಿಸಿದ್ದಾರೆ. ಆದರೆ ಈ ವಿಡಿಯೋದಲ್ಲಿ ಎಲ್ಲಿಯೂ ಅತಿಶಿ ಜೈಶ್ರೀರಾಮ್‌ ಎಂಬ ಘೋಷಣೆ ಕೂಗಿದ್ದಾಗಲಿ, ಅದಕ್ಕೆ ಅವರು ಕ್ಷಮೆ ಕೇಳಿದ್ದಾಗಲಿ ಕಂಡು ಬಂದಿಲ್ಲ ಹಾಗಾಗಿ ವೈರಲ್‌ ಆಗುತ್ತಿರುವ ವಿಡಿಯೋ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ :  ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು


ಈ ವಿಡಿಯೋ ನೋಡಿ : ಮೈಸೂರಿನ ಸಭೆಯಲ್ಲಿ ದೇವೇಗೌಡರು ಬಿಜೆಪಿಯನ್ನು ಸೋಲಿಸಲೇಬೇಕು ಎಂದು ಕರೆಕೊಟ್ಟಿದ್ದಾರೆ ಎಂಬುದು ಸುಳ್ಳು


ನಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *