Fact Check: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೈಕ್‌ ರ್ಯಾಲಿಗೆ ತಡೆ ಎಂದು ಒರಿಸ್ಸಾದ ವಿಡಿಯೋ ಹಂಚಿಕೆ

ಪಶ್ಚಿಮ ಬಂಗಾಳ

ಇತ್ತೀಚೆಗೆ ಪಶ್ಚಿಮ ಬಂಗಾಳ ರಾಜ್ಯವನ್ನು ಮತ್ತು ತ್ರುಣಮೂಲ್ ಕಾಂಗ್ರೆಸ್‌(TMC) ಪಕ್ಷವನ್ನು ಕೇಂದ್ರವಾಗಿರಿಸಿಕೊಂಡು ಸಾಕಷ್ಟು ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲು ಸುಳ್ಳು ಸುದ್ದಿಗಳನ್ನು ಅಸ್ತ್ರವಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿದೆ.

ಅದರ ಭಾಗವಾಗಿ ಈಗ, “ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಬೈಕ್‌ ರ್ಯಾಲಿಯನ್ನು ತಡೆದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.” ಎಂದು ಪ್ರತಿಪಾದಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಭಗವಧ್ವಜ ಬಾವುಟ ಮತ್ತು ಬೈಕುಗಳು ನೆಲದ ಮೇಲೆ ಬಿದ್ದಿರುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಿದಾಗ ಈ ವೀಡಿಯೊ ಹಳೆಯದು ಮತ್ತು ಪಶ್ಚಿಮ ಬಂಗಾಳದಲ್ಲ, ಬದಲಿಗೆ ಒಡಿಶಾದ ಸಂಬಲ್‌ಪುರದ್ದಾಗಿದೆ ಎಂದು ತಿಳಿದು ಬಂದಿದೆ. ಗೂಗಲ್ ರಿವರ್ಸ್‌ ಇಮೇಜ್ ಮೂಲಕ ಹುಡುಕಿದಾಗ ಎಕ್ಸ್‌ ಪೋಸ್ಟ್‌ ಒಂದು ಲಭ್ಯವಾಗಿದ್ದು ಅದರಲ್ಲಿ ಹನುಮ ಜಯಂತಿಯ ಬೈಕ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು ಪೋಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ ಇದರಿಂದ 10ಕ್ಕೂ ಹೆಚ್ಚು ಪೋಲಿಸರು ಮತ್ತು 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದಿದೆ.

 

ಹನುಮಾನ್ ಜಯಂತಿ ಅವಧಿಯಲ್ಲಿ ಸಂಭವಿಸಿದ ಹಿಂಸಾಚಾರವನ್ನು ಒಳಗೊಂಡಂತೆ ಒಡಿಶಾ ಮೂಲದ ಮಾಧ್ಯಮಗಳಿಂದ ಹಲವಾರು ಸುದ್ದಿ ವರದಿಗಳನ್ನು ನಾವು ನೋಡಬಹುದು. ಈ ಸುದ್ದಿ ಬುಲೆಟಿನ್‌ಗಳು ಇದೇ ರೀತಿಯ ಅಶಾಂತಿಯ ದೃಶ್ಯಗಳನ್ನು ಹೊಂದಿವೆ ಮತ್ತು ಘಟನೆಯ ಬಗ್ಗೆ ವಿಚಾರಣೆಗಾಗಿ ಹಲವಾರು ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಏಪ್ರಿಲ್ 12, 2023 ರಂದು ಕಳಿಂಗ ಟಿವಿ ಪ್ರಸಾರ ಮಾಡಿದ ಅಂತಹ ಒಂದು ವರದಿಯನ್ನು ಕೆಳಗೆ ನೋಡಬಹುದು.

ಏಪ್ರಿಲ್ 16, 2023 ರಂದು NDTV ಯ ವರದಿಯ ಪ್ರಕಾರ, ಹನುಮಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಸಂಬಲ್‌ಪುರ ನಗರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾಗವಹಿಸಿದ ಆರೋಪದ ಮೇಲೆ ಒಡಿಶಾ ಪೊಲೀಸರು 79 ಜನರನ್ನು ಬಂಧಿಸಿದ್ದಾರೆ. ಘಟನೆಯ ನಂತರ ಈ ಪ್ರದೇಶವು ಕರ್ಫ್ಯೂ ಮತ್ತು ಇಂಟರ್ನೆಟ್ ಅಮಾನತು ಎರಡಕ್ಕೂ ಸಾಕ್ಷಿಯಾಗಿದೆ ಎಂದು ಅವರು ವರದಿ ಮಾಡಿದ್ದಾರೆ.

ಆದ್ದರಿಂದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಹನುಮಾನ್ ಜಯಂತಿಯ ಬಿಜೆಪಿ ರ್ಯಾಲಿಯನ್ನು ತಡೆದಿದ್ದಾರೆ ಎಂಬುದು ಸುಳ್ಳು. ಈ ವಿಡಿಯೋ ಒಂದು ವರ್ಷ ಹಳೆಯದು ಮತ್ತು ಒರಿಸ್ಸಾಗೆ ಸಂಬಂಧಿಸಿದ್ದಾಗಿದೆ.


ಇದನ್ನು ಓದಿ: ಬಳ್ಳಾರಿಯಲ್ಲಿ ಕಲ್ಯಾಣ್ ಜ್ಯುವೆಲರ್ಸ್‌ನಲ್ಲಿ ಎಸಿ ಸ್ಪೋಟಗೊಂಡಿದೆಯೇ ಹೊರತು ಉಗ್ರರ ಸ್ಪೋಟವಲ್ಲ


ವಿಡಿಯೋ ನೋಡಿ: ಕುಕ್ಕೆ ದೇವಸ್ಥಾನಕ್ಕೆ ರಾಜ್ಯ ಸರ್ಕಾರ ಕ್ರಿಶ್ಚಿಯನ್‌ ಅಧಿಕಾರಿ ನೇಮಿಸಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *