Fact Check: ಡಾ. ಬಿ.ಆರ್ ಅಂಬೇಡ್ಕರ್ RSS ಶಾಖೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು

RSS

ಇತ್ತೀಚೆಗೆ, ಡಾ.ಬಿ.ಆರ್.ಅಂಬೇಡ್ಕರ್ ರವರನ್ನು ಪ್ರತಿ ರಾಜಕೀಯ ಪಕ್ಷವು ತಮ್ಮವರೇ ಎಂದು ಹೇಳಿಕೊಳ್ಳಲು ಬಯಸುವ ಐಕಾನ್ ಆಗಿ ಮಾರ್ಪಟ್ಟಿದ್ದಾರೆ.  ಅವರ ಮರಣದ ನಂತರ ಅವರು ಬಿಟ್ಟುಹೋದ ಶ್ರೀಮಂತ ರಾಜಕೀಯ ಮತ್ತು ಬೌದ್ಧಿಕ ಪರಂಪರೆಯನ್ನು ಲಾಭ ಮಾಡಿಕೊಳ್ಳಲು ಅನೇಕರು ವಿವಿಧ ರಾಜಕೀಯ ಸಿದ್ಧಾಂತಗಳಲ್ಲಿ ಪ್ರಯತ್ನಿಸಿದ್ದಾರೆ. ಅವರ ಅಪ್ರತಿಮ ಸ್ಥಾನಮಾನ ಮತ್ತು ಅನನ್ಯ ಜನಪ್ರಿಯತೆಯ ಆಕರ್ಷಣೆಯನ್ನು ಪರಿಗಣಿಸಿ, ಅವರ ಹೆಸರನ್ನು ಉಲ್ಲೇಖಿಸುವುದು ಈಗ ಅಗತ್ಯವಾಗಿದೆ. ಆದರೆ ರಾಜಕೀಯ ಸಿದ್ಧಾಂತಗಳಾಚೆಗೆ ಅವರ ವಿಚಾರಗಳೊಂದಿಗಿನ ಒಡನಾಟವು ಹೆಚ್ಚಾಗಿ ಮೇಲ್ನೋಟದ ಸಾಂಕೇತಿಕತೆಗೆ ಸೀಮಿತವಾಗಿದೆ ಅಷ್ಟೆ.

ಅದರಂತೆ ಡಾ. ಅಂಬೇಡ್ಕರ್ ಅವರು 1939 ರಲ್ಲಿ ಪುಣೆಯ RSS ಶಿಬಿರಕ್ಕೆ ಭೇಟಿ ನೀಡಿ “ಸ್ವಯಂಸೇವಕರು ಇತರ ಜಾತಿಯವರನ್ನು ಸಹ ಸಂಪೂರ್ಣ ಸಮಾನತೆ ಮತ್ತು ಸಹೋದರತ್ವದಿಂದ ನಡೆಸಿಕೊಳ್ಳುತ್ತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿದೆ” ಎಂದಿದ್ದರು. ಎಂಬ ಸುದ್ದಿಗಳು ಮತ್ತು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಬಾಬಾಸಾಹೇಬ್ ಅಂಬೇಡ್ಕರ್

 

ಫ್ಯಾಕ್ಟ್‌ಚೆಕ್‌: ಅಂಬೇಡ್ಕರ್‌ರವರು ಬದುಕಿದ ಸಂದರ್ಭದಲ್ಲೇ ಅವರಿಂದ ಮಾಹಿತಿ ಪಡೆದು ಜೀವನ ಚರಿತ್ರೆ ರಚಿಸಿದ ಧನಂಜಯ್ ಕೀರ್‌ರವರ ಪುಸ್ತಕ “ಡಾ. ಬಾಬಾಸಾಹೇಬ್ ಅಂಬೇಡ್ಕರ್‌” ಪುಸ್ತಕದಲ್ಲಿ ಎಲ್ಲಿಯೂ ಇದರ ಉಲ್ಲೇಖವಿಲ್ಲ. ಇನ್ನು ಅಂಬೇಡ್ಕರ್‌ವರ ಆಪ್ತ ಸಹಾಯಕ ನಾನಕ್ ಚಂದ್ ರತ್ತು ರವರು ಬರೆದಿರುವ “Reminiscences and remembrances of Dr. B.R. Ambedkar” ಪುಸ್ತಕದಲ್ಲಿಯೂ ಸಹ ಅಂಬೇಡ್ಕರು RSS ಶಾಖೆಗೆ ಭೇಟಿ ನೀಡಿದ ಉಲ್ಲೇಖವಿಲ್ಲ.

ಈಗಾಗಲೇ ಅಂಬೇಡ್ಕರ್‌ರವರ ಜೀವಿತಾವದಿಯಲ್ಲಿ ಮಾಡಿದ ಭಾಷಣಗಳು ಮತ್ತು ಅವರ ಬರವಣಿಗೆಗಳನ್ನೆಲ್ಲಾ ಸಂಗ್ರಹಿಸಿದ “ಅಂಬೇಡ್ಕರ್ ಭಾಷಣ ಮತ್ತು ಬರಹಗಳು” ಸರಣಿಯಲ್ಲಿ ಸಹ ಇದರ ವಿವರಗಳಿಲ್ಲ.  ದಿ ಪ್ರಿಂಟ್‌ ವೆಬ್‌ಸೈಟ್‌ನಲ್ಲಿ ರಾಜಿವ್ ತುಲಿ ಎಂಬ RSS ಕಾರ್ಯಕರ್ತ ಬರೆದ ಲೇಖನದಲ್ಲಿ ಅಂಬೇಡ್ಕರ್‌ರವರು RSS ಶಾಖೆಗೆ ಭೇಟಿ ನೀಡಿದ್ದರು ಎಂದಿದ್ದಾರೆ. ಆದರೆ ಅವರು ಯಾವುದೇ ಆಧಾರ ಒದಗಿಸಿಲ್ಲ. ಅಂಬೇಡ್ಕರ್‌ RSS ಶಾಖೆಗೆ ಭೇಟಿ ನೀಡಿದ್ದರೆ, ಎಂದು ಭೇಟಿ ನೀಡಿದ್ದರು? ಅಂದು ಸ್ವಯಂಸೇವಕರನ್ನು ಉದ್ದೇಶಿಸಿ ಯಾವ್ಯಾವ ವಿಷಯಗಳ ಕುರಿತು ಭಾಷಣ ಮಾಡಿದರು? ಎಂಬ ಪ್ರಶ್ನೆಗಳಿಗೆ ಯಾವ ಉತ್ತರವೂ ಇಲ್ಲದಿರುವುದರಿಂದ ಅಂಬೇಡ್ಕರ್‌ರವರು RSS ಶಾಖೆಗೆ ಭೇಟಿ ನೀಡಿದ್ದರು  ಎಂಬುದು ಸುಳ್ಳು.

ಹಿಂದು ಧರ್ಮದ, RSS ಮತ್ತು ಹಿಂದು ಮಹಾಸಭಾದ ಕಟುವಿಮರ್ಶಕರಾಗಿದ್ದಾರೆ ಡಾ. ಬಿ.ಆರ್ ಅಂಬೇಡ್ಕರ್‌ ರವರು ತಮ್ಮ ಮೂಕ ನಾಯಕ, ಬಹಿಷ್ಕೃತ ಭಾರತ ಮತ್ತು ಪ್ರಬುದ್ಧ ಭಾರತದಲ್ಲಿ ಹಿಂದು ಧರ್ಮದಲ್ಲಿ ಆಚರಿಸಲ್ಪಡುತ್ತಿರುವ ಅನಿಷ್ಟ ಪದ್ದತಿಗಳ, ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣವಾದದ ವಿರುದ್ದ ಸರಣಿ ಲೇಖನಗಳನ್ನು ಪ್ರಕಟಿಸಿದ್ದರು. ಕೊನೆಗೆ ಹಿಂದು ಧರ್ಮ ತೊರೆದು ಬೌದ್ದ ಧರ್ಮವನ್ನು ಅನುಸರಿಸಿದರು. ಆದ್ದರಿಂದ ಆರ್‌ಎಸ್‌ಎಸ್‌ ಕೃಪಾಪೋಷಿತ ಸುದ್ದಿ ಮಾಧ್ಯಮಗಳು ವರದಿ ಮಾಡಿರುವಂತೆ ಅಂಬೇಡ್ಕರ್‌ರವರು ಆರ್‌ಎಸ್‌ಎಸ್‌ ಕೆಲಸ-ಕಾರ್ಯಗಳನ್ನು ಶ್ಞಾಘಿಸಿದ್ದರು, ಹಿಂದುರಾಷ್ಟ್ರಕ್ಕೆ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದರು ಎಂಬುದು ಸುಳ್ಳು.

ಡಾ. ಅಂಬೇಡ್ಕರ್‌ರವರು ತಮ್ಮ ಪ್ರಬುದ್ಧ ಭಾರತದಲ್ಲಿ ವಿ .ಡಿ ಸಾವರ್ಕರ್‌ರವರನ್ನು ಟೀಕಿಸಿ ಬರೆದ ಲೇಖನ.


ಇದನ್ನು ಓದಿ: Fact Check : ನಕಲಿ ವೆಬ್‌ಸೈಟ್‌ನಲ್ಲಿ ಉದ್ಯೋಗ ಆಮೀಷ, ನಂಬಿದರೆ ಮೋಸ ಹೋಗುತ್ತೀರಿ ಎಚ್ಚರ.!


ಈ ವಿಡಿಯೋ ನೋಡಿ : Fact Check : ತಿರುಪತಿ ಪುರೋಹಿತರ ಮನೆಯಲ್ಲಿ 128KG ಚಿನ್ನ ಪತ್ತೆ ಎಂದು ತಮಿಳುನಾಡಿನ ವಿಡಿಯೋ ಹಂಚಿಕೆ.!


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *