ಆಲೂಗೆಡ್ಡೆಯಿಂದ ಚಿನ್ನ ತೆಗೆಯಬಹುದೆಂಬ ಹೇಳಿಕೆ ರಾಹುಲ್ ಗಾಂಧಿಯವರದ್ದಲ್ಲ: ಮೋದಿ ಕುರಿತು ಹೇಳಿದ್ದು!

ಚಿನ್ನ

ಒಂದು ಮೆಷಿನ್‌ ಸ್ಥಾಪಿಸುತ್ತೇನೆ. ಈ ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎಂಬ 20 ಸೆಕೆಂಡ್‌ಗಳ ವಿಡಿಯೋವೊಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಬಿಜೆಪಿಯ ಅಧಿಕೃತ ಟ್ವಿಟರ್‌ನಲ್ಲಿ ಅದೇ ಮಾಹಿತಿ ಒಳಗೊಂಡ ಪೋಸ್ಟರ್ ಒಂದನ್ನು ಹಂಚಿಕೊಂಡು ಲೇವಡಿ ಮಾಡಲಾಗಿದೆ. ಆಲೂಗೆಡ್ಡೆಯಿಂದ ಚಿನ್ನ ಮಾಡುವ ಮೆಷಿನ್ ಸ್ಥಾಪಿಸಿದ್ದೇನೆಂದು ರಾಹುಲ್ ಗಾಂಧಿ ಹೇಳಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್:

ಈ ಕುರಿತು ಗೂಗಲ್‌ನಲ್ಲಿ ಹುಡುಕಿದಾಗ ರಾಹುಲ್ ಗಾಂಧಿ ಭಾಷಣದ ವಿಡಿಯೋಗಳು ಲಭ್ಯವಾಗಿವೆ. ನವೆಂಬರ್ 02, 2017ರಂದು ಗುಜರಾತ್ ಚುನಾವಣೆಗೆ ಮುಂಚೆ ಪಠಾಣ್ ಎಂಬಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ 26 ನಿಮಿಷಗಳ ವಿಡಿಯೋ ರಾಹುಲ್ ಗಾಂಧಿ ಯೂಟ್ಯೂಬ್‌ನಲ್ಲಿ ಪ್ರಕಟ ಮಾಡಲಾಗಿದೆ. ಈ ವಿಡಿಯೋದಿಂದಲೇ  ವೈರಲ್ ಆಗುತ್ತಿರುವ 20 ಸೆಕೆಂಡ್‌ಗಳ ಕ್ಲಿಪ್ ಅನ್ನು ಕಟ್ ಮಾಡಿ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ರಾಹುಲ್ ಗಾಂಧಿಯವರು ತಮ್ಮ ಪೂರ್ಣ ಭಾಷಣದಲ್ಲಿ “ಮೋದಿಯವರು ಗುಜರಾತಿನ ರೈತರಿಗೆ ಹಲವು ಭರವಸೆಗಳನ್ನು ಕೊಟ್ಟಿದ್ದರು, ಆದರೆ ಯಾವುದನ್ನು ಈಡೇರಿಸಿಲ್ಲ. ನಾನೊಂದು ಮೆಷಿನ್‌ ಸ್ಥಾಪಿಸುತ್ತೇನೆ. ಈ ಕಡೆ ಆಲೂಗೆಡ್ಡೆ ಹಾಕಿದರೆ ಆ ಕಡೆ ಚಿನ್ನ ಬರುತ್ತದೆ ಎಂದು ಮೋದಿ ಹೇಳಿದ್ದರು. ಇವು ನನ್ನ ಮಾತುಗಳಲ್ಲ, ಮೋದಿಯವರು ಮಾತುಗಳು” ಎಂದು ಟೀಕಿಸಿದ್ದರು. ಆದರೆ ವಿಡಿಯೋದಲ್ಲಿನ ‘ಇವು ನನ್ನ ಮಾತುಗಳಲ್ಲ, ನರೇಂದ್ರ ಮೋದಿಯವರ ಮಾತುಗಳು” ಎಂದು ರಾಹುಲ್ ಗಾಂಧಿ ಹೇಳುವುದನ್ನು ಕಟ್ ಮಾಡಿ ಸುಳ್ಳು ಹರಡಲಾಗಿದೆ. ಆದರೆ ರಾಹುಲ್ ಗಾಂಧಿಯವರು ಮೋದಿಯವರನ್ನು ಟೀಕಿಸಿದ್ದಾರೆಯೇ ಹೊರತು ಅಂತಹ ಆಲೂಗೆಡ್ಡೆ ಯಂತ್ರ ತಾನು ಸ್ಥಾಪಿಸುತ್ಥೇನೆ ಎಂದು ಹೇಳಿಲ್ಲ. ಅದರ ಪೂರ್ಣ ವಿಡಿಯೋವನ್ನು ಈ ಕೆಳಗೆ ನೋಡಬಹುದು. 17 ನಿಮಿಷ 51ನೇ ಸೆಕೆಂಡ್‌ನಿಂದ ಈ ಕುರಿತು ಮಾತನಾಡುತ್ತಾರೆ ಮತ್ತು 18 ನಿಮಿಷ 13 ನೇ ಸೆಕೆಂಡ್‌ನಲ್ಲಿ ಇವು ನನ್ನ ಮಾತುಗಳಲ್ಲ, ನರೇಂದ್ರ ಮೋದಿಯವರ ಮಾತುಗಳು ಎಂದು ರಾಹುಲ್ ಗಾಂಧಿ ಹೇಳುವುದನ್ನು ನೋಡಬಹುದು.


(ವೈರಲ್ ವಿಡಿಯೋ ಮತ್ತು ಮೂಲ ವಿಡಿಯೋ ಎರಡನ್ನೂ ಇಲ್ಲಿ ನೋಡಬಹುದು)

ಮೋದಿ ಹೀಗೆ ಹೇಳಿದ್ದರೆ?

ಇನ್ನು ಮೋದಿಯವರು ಸಹ ನನ್ನ ಪಕ್ಷವಾಗಲೀ ಅಥವಾ ನಾನಾಗಲಿ ಆಲೂಗಡ್ಡೆಯಿಂದ ಚಿನ್ನವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. 2019ರಲ್ಲಿ ಉತ್ತರ ಪ್ರದೇಶದ ಕನೌಜ್‌ನಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಆಲೂಗಡ್ಡೆಯಿಂದ ಚಿನ್ನ ಮಾಡುವುದಾಗಿ ಹೇಳಿಕೊಳ್ಳುವ ಕೆಲವರಂತೆ ನಾವು ಭರವಸೆ ನೀಡುವುದಿಲ್ಲ ಎಂದಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ತನ್ನ ಅಧಿಕೃತ ಯೂಟ್ಯೂಬ್‌ನಲ್ಲಿ ಪ್ರಕಟಿಸಿದೆ.

ಇದೇ ವಿಡಿಯೋವನ್ನು ಎಡಿಟ್ ಮಾಡಿ ಆಲೂಗೆಡ್ಡೆಯಿಂದ ಚಿನ್ನ ಮಾಡಬಹುದು ಎಂದು ತಿರುಚಲಾಗಿದೆ. ಹಾಗಾಗಿ ಅದು ಎಡಿಟೆಡ್ ವಿಡಿಯೋ ಆಗಿದೆ. ವಾಸ್ತವದಲ್ಲಿ ರಾಹುಲ್ ಗಾಂಧಿಯಾಗಲಿ, ಮೋದಿಯಾಗಲಿ ಅಂತಹ ಹೇಳಿಕೆ ನೀಡಿಲ್ಲ.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ:


ಇದನ್ನೂ ಓದಿ; ಕಾಂಗ್ರೆಸ್ ತರಲೊರಟ್ಟಿದ್ದ ದಂಗೆ ತಡೆ ಮಸೂದೆ ಮುಸ್ಲಿಂ ಪರವಾಗಿದ್ದು, ಹಿಂದೂ ವಿರುದ್ಧವಿತ್ತು ಎಂಬುದು ಸಂಪೂರ್ಣ ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *