Fact Check | ಎನ್‌ಸಿಪಿ ನಾಯಕ ಜಿತೇಂದ್ರ ಅವಾದ್‌ ಮೇಲೆ ಹಲ್ಲೆ ನಡೆದಿದೆ ಎಂಬ ವಿಡಿಯೋ 2015ರದ್ದು

“ಭಗವಾನ್ ರಾಮ ಮಾಂಸಹಾರಿ ಹೇಳಿಕೆಗೆ ತೀವ್ರ ಟೀಕೆ ಎದುರಿಸಿದ ಬಳಿಕ ಎನ್‌ಸಿಪಿ ನಾಯಕ ಜಿತೇಂದ್ರ ಅವಾದ್‌ಗೆ ಕೆಲ ಹಿಂದೂಗಳು ಥಳಿಸಿ ಬುದ್ದಿ ಕಲಿಸಿದ್ದಾರೆ.” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋದಲ್ಲಿ ಎನ್‌ಸಿಪಿ ನಾಯಕ ಜೀತೆಂದ್ರ ಅವಾದ್ ಅವರು ವೇದಿಕೆಯ ಮೇಲೆ ಭಾಷಣ ಮಾಡಲು ಮುಂದಾಗುತ್ತಾರೆ. ಆಗ ಅಲ್ಲೇ ಇದ್ದ ಕೆಲವರು ಪೊಲೀಸ್ ಅಧಿಕಾರಿಗಳ ಮುಂದೆಯೇ ಜಿತೇಂದ್ರ ಅವರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಬಳಿಕ ಅವಾದ್ ಅವರು ವೇದಿಕೆಯಿಂದ ಇಳಿದು ಕಾರ್ಯಕ್ರಮದಿಂದ ಹೊರ ನಡೆಯುತ್ತಾರೆ

ಫ್ಯಾಕ್ಟ್‌ಚೆಕ್

ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್ ತಂಡ ಪರಿಶೀಲನೆ ನಡೆಸಿದ್ದು ಒಂದು ವೇಳೆ ಜಿತೇಂದ್ರ ಅವಾದ್‌ ಮೇಲೆ ಹಲ್ಲೆ ನಡೆದಿದೆ ಎಂದರೆ ಯಾವುದಾದರು ಒಂದು ಮಾಧ್ಯಮವಾದರೂ ಈ ಕುರಿತು ಸುದ್ದಿಯನ್ನು ಪ್ರಕಟಿಸಬೇಕಿತ್ತು. ಆದರೆ ಈ ಕುರಿತು ಮರಾಠಿ ಮಾಧ್ಯಮವಾಗಲಿ ಅಥವಾ ರಾಷ್ಟ್ರೀಯ ಮಾಧ್ಯಮಗಳ ವರದಿಯಾಗಲಿ ಕಂಡು ಬಂದಿಲ್ಲ.

ಇನ್ನು ಹಲ್ಲೆ ನಡೆದಿದೆ ಎಂದು ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ವಿವಿಧ ಕೀ ಫ್ರೇಮ್‌ಗಳನ್ನಾಗಿ ವಿಂಗಡಿಸಿ ಪರಿಶೀಲಿಸಿದಾಗ, ರಾಷ್ಟೀಯ ಮಾಧ್ಯಮವೊಂದರ ವರದಿಯೊಂದು ಕಂಡು ಬಂದಿದೆ. ಅದರಲ್ಲಿ ಇದು 21 ಜುಲೈ 2015 ರಲ್ಲಿ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಗಲಾಟೆಯ ಕುರಿತು ಮತ್ತು ಅವಾದ್ ಅವರ ಕುರಿತು ಉಲ್ಲೇಖವಿರುವುದು ಕಂಡು ಬಂದಿದೆ.

ಅವಾದ್‌ ಅವರು ಮರಾಠಿ ಸಂಘಟನೆಯ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾರೆ. ಆ ಸಂಘಟನೆ ಮಹಾರಾಷ್ಟ್ರ ಸರ್ಕಾರ ರಾಜ್ಯ ಭೂಷಣ ಪ್ರಶಸ್ತಿಯನ್ನು ಬಾಬಾ ಸಾಹೇಬ್ ಪುರಂದರೆ ಅವರಿಗೆ ನೀಡುವುದಕ್ಕೆ ವಿರೋಧ ವ್ಯಕ್ತ ಪಡಿಸಿತ್ತು. ಆದರೆ ಸರ್ಕಾರ ನಿರ್ಧಾರದ ಪರವಾಗಿ ಇದ್ದ ಶಿವ ಪ್ರತಿಷ್ಠಾನ ಸಂಘಟನೆಯ ನಾಯಕರು ಅವಾದ್ ಅವರು ಭಾಷಣ ಮಾಡುತ್ತಿದ್ದಂತೆ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಶಿವ ಪ್ರತಿಷ್ಠಾನ ಸಂಘಟನೆಯ ನಾಯಕರು ವೇದಿಕೆಗೆ ನುಗ್ಗಿ ಅವಾದ್ ಅವರು ಮೇಲೆ ದಾಳಿ ನಡೆಸುತ್ತಾರೆ. ಈಗ ಇದೇ ವಿಡಿಯೋವನ್ನು ಬಳಸಿ ಇದು ಇತ್ತೀಚಗೆ ನಡೆದ ಘಟನೆ ಎಂದು ಬಿಂಬಿಸಲಾಗುತ್ತಿದೆ.


ಇದನ್ನೂ ಓದಿ : Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್‌ ಠಾಕೂರ್‌ ಹೇಳಿಲ್ಲ


ಈ ವಿಡಿಯೋ ನೋಡಿ : Fact Check | ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಬಿಡುಗಡೆಯಾಗಲಿದೆ ಎಂದು ಅನುರಾಗ್‌ ಠಾಕೂರ್‌ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *