Fact Check | ಯೋಗೇಂದ್ರ ಯಾದವ್‌, ಮಣಿವಣ್ಣನ್‌ ಮುಸ್ಲಿಂ ಧರ್ಮದವರು ಎಂಬುದು ಸುಳ್ಳು

“ಯೋಗೇಂದ್ರ ಯಾದವ್‌ ನಿಜವಾದ ಹೆಸರು ಸಲೀಮ್‌, ಈತ ಹಿಂದೂ ಮುಖವಾಡ ಹಾಕಿ ಶಾಹೀನ್‌ ಬಾಗ್‌ ಮತ್ತು ರೈತ ಮೋರ್ಚಾ ಹೋರಾಟದಲ್ಲಿ ಭಾಗಿಯಾಗಿದ್ದ. ಇನ್ನು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿರುವ ಮಣಿವಣ್ಣನ್‌ ನಿಜವಾದ ಹೆಸರು ಅಬ್ದುಲ್‌ ಕಲಾಮ್‌”ಎಂಬ ಸುದ್ದಿಯೊಂದನ್ನು ಬಲ ಪಂಥೀಯ ಪ್ರೊಪಗೆಂಡ ಹೊಂದಿರುವ ಹಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಆ ಮೂಲಕ ವಾಸ್ತಾವವಾಗಿ ರೈತ ಹೋರಾಟದಲ್ಲಿ ಗುರುತಿಸಿಕೊಂಡವರು ಮತ್ತು ಅಧಿಕಾರಿ ವರ್ಗದಲ್ಲಿ ಪ್ರಾಮಾಣಿಕ ಕೆಲಸಗಳಿಂದ ಗುರುತಿಸಿಕೊಂಡವರನ್ನು ತುಳಿಯುವ ಪ್ರಯತ್ನವನ್ನು ಮಾಡಲಾಗುತ್ತಿರುವುದು ಜಗತ್‌ ಜಾಹೀರಾಗಿದೆ.

ಫ್ಯಾಕ್ಟ್‌ಚೆಕ್‌

ಈ ಕುರಿತು ಸತ್ಯ ಪರಿಶೀಲನೆ ನಡೆಸೋದಕ್ಕೆ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಹಲವು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಿತು ಆದರೆ ಇದಕ್ಕೆ ಈ ವೇಳೆ ಯೋಗೇಂದ್ರ ಯಾದವ್‌ ಅವರ ಸಲೀಂ ಎಂಬ ಹೆಸರಿನ ಕುರಿತು ಕೆಲವೊಂದು ಮಾಹಿತಿ ಪತ್ತೆಯಾಗಿದೆ. ಈ ಕುರಿತು 2019 ಏಪ್ರಿಲ್‌ 18ರಂದು ಯೋಗೇಂದ್ರ ಯಾವವ್‌ ಅವರೇ ಇಂಡಿಯಾ ಟುಡೆ ಸಂದರ್ಶನದಲ್ಲಿ ಹೇಳಿಕೊಂಡಿದ್ದು, 1936 ರಲ್ಲಿ, ಈಗಿನ ಹರಿಯಾಣಾದ ಹಿಸಾರ್ ಎನ್ನುವ ಪಟ್ಟಣದಲ್ಲಿ ರಾಮ್ ಸಿಂಗ್ ಎಂಬ ವ್ಯಕ್ತಿ ಶಾಲೆಯ ಶಿಕ್ಷಕರಾಗಿದ್ದರು. ಆ ಸ್ವಾತಂತ್ರಪೂರ್ವದ ಸಮಯದಲ್ಲಿ.

ಅಲ್ಲಲ್ಲಿ ಕೋಮು ದಳ್ಳುರಿಗಳು ನಡೆಯುತ್ತಿದ್ದವು. ರಾಮ್‍ಸಿಂಗ್ ಅವರು ಶಿಕ್ಷಕರಾಗಿದ್ದ ಶಾಲೆಗೆ ಕೋಮು ಗಲಭೆಯನ್ನೆಬ್ಬಿಸುತ್ತ ಮುಸಲ್ಮಾನರ ಗುಂಪೊಂದು ಬಂದು ಅಲ್ಲಿದ್ದ ಮಕ್ಕಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಗಲಾಟೆ ಎಬ್ಬಿಸಿದ್ದರು. ಮಕ್ಕಳನ್ನು ಮುಟ್ಟುವುದಕಿಂತ ಮೊದಲು ನನ್ನನ್ನು ನೋಡಿಕೊಳ್ಳಿ ಎಂದು ತಮ್ಮ ಕರ್ತವ್ಯವನ್ನು ರಾಮ್‍ಸಿಂಗ್ ಪಾಲಿಸಿದ್ದರು. ಆಗ ಅವರ ಕುತ್ತಿಗೆಯನ್ನು ಕುಡಗೋಲಿನಿಂದ ಗಲಭೆಕೋರರು ಸೀಳಿದರು. ಈ ಘಟನೆಯನ್ನು ನೋಡುತ್ತ ನಿಂತವರಲ್ಲಿ ಏಳು ವರ್ಷದ ಒಬ್ಬ ಬಾಲಕ ದೇವೇಂದ್ರ ಸಿಂಗ್, ಕೊಲೆಗೀಡಾದ ಶಿಕ್ಷಕ ರಾಮ್‍ಸಿಂಗ್ ಅವರ ಪುತ್ರ.

ನ್ನ ತಂದೆಯನ್ನು ತನ್ನ ಕಣ್ಣೆದುರಿಗೇ ಕೊಂದ ಮುಸಲ್ಮಾನರನ್ನು ದ್ವೇಷಿಸಲು ಅವರಿಗೆ ಸಾಕಷ್ಟು ಕಾರಣಗಳಿದ್ದವು. ಆದರೆ ಆ ಬಾಲಕ ಬೆಳೆಯುತ್ತಿರುವ ಸಮಯ ಸ್ವಾತಂತ್ರ ಸಂಗ್ರಾಮದ ಸಮಯ. ಗಾಂಧೀಜಿಯವರ ಸತ್ಯಾಗ್ರಹಗಳ, ಹಿಂದು ಮುಸ್ಲಿಂ ಏಕತೆಗಾಗಿ ಜೀವ ತೇಯುತ್ತಿದ್ದ ಸಮಯ. ‘ನಾನೊಬ್ಬ ಹಿಂದು ಆಗಲಿ, ಮುಸಲ್ಮಾನನಾಗಲಿ ಆಗುವುದಿಲ್ಲ, ನಾನು ಆಗುವುದು ಒಬ್ಬ ಮನುಷ್ಯ’ ಎನ್ನುವ ಮಾತುಗಳನ್ನು ಕೇಳಿದ ದೇವೇಂದ್ರ ಸಿಂಗ್, ತಮ್ಮ ಜೀವನದಲ್ಲಿ ದ್ವೇಷವು ಪರಿಣಾಮ ಬೀರಲು ಅವಕಾಶ ನೀಡಲಿಲ್ಲ.

ಮುಂದೆ ಬೆಳೆದು ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ದೇವೇಂದ್ರ ಸಿಂಗ್, ತಮ್ಮ ಮಕ್ಕಳಿಗೆ ಮುಸ್ಲಿಂ ಹೆಸರುಗಳನ್ನು ನೀಡಲು ನಿರ್ಧರಿಸಿದರು. ತನ್ನ ತಂದೆಯನ್ನು ತನ್ನೆದುರಿಗೆ ಕೊಂದ ಸಮುದಾಯದವರ ಹೆಸರನ್ನು ನೀಡಲು ನಿರ್ಧರಿಸಿದರು. ಮೊದಲ ಮಗುವಿಗೆ ನಜ್ಮಾ ಎಂದು ಹೆಸರಿಡುವಾಗ ಅವರ ಹೆಂಡತಿ, ‘ಮಗಳಿಗೆ ಬೇಡ, ಮುಂದೆ ಗಂಡು ಮಗುವಾದಾಗ ಈ ಪ್ರಯೋಗವನ್ನು ಮಾಡುವ, ಹೆಣ್ಣು ಮಗಳ ಮೇಲೆ ಬೇಡ, ಮುಂದೆ ಮದುವೆಗೆ ಸಮಸ್ಯೆಯಾಗುತ್ತೆ’ ಎಂದರು. ಹಾಗಾಗಿ ಆ ಹೆಣ್ಣು ಮಗುವಿಗೆ ನೀಲಂ ಎಂದು ನಾಮಕರಣ ಮಾಡಲಾಯಿತು. ನಂತರ ಗಂಡು ಮಗುವಾದಾಗ ಸಲೀಂ ಎನ್ನುವ ಹೆಸರನ್ನಿಟ್ಟರು.

ರಾಜಸ್ಥಾನದ ಒಂದು ಹಳ್ಳಿಯಲ್ಲಿ ಶಾಲೆಗೆ ಹೋಗುತ್ತಿದ್ದ ಆ ಬಾಲಕನ ಶಾಲೆಯಲ್ಲಿ ಯಾವ ಮುಸಲ್ಮಾನ ಮಕ್ಕಳೂ ಇರಲಿಲ್ಲ. ಹಾಗಾಗಿ ಎಲ್ಲ ಮಕ್ಕಳಿಗೂ ಇವನ ಬಗ್ಗೆ ಕುತೂಹಲ. ‘ನೀನ್ಯಾರು, ನಿನ್ನನ್ನು ದತ್ತು ತೆಗೆದುಕೊಂಡಿದ್ದಾರಾ? ಮುಸಲ್ಮಾನರು ಹೇಗಿರುತ್ತಾರೆ?’ ಎಂದೆಲ್ಲಾ ಪೀಡಿಸಲಾರಂಭಿಸಿದರು. ತಂದೆ ದೇವೇಂದ್ರ ಜಾತ್ಯತೀತತೆಯ ಬಗ್ಗೆ ಆ ಪುಟ್ಟ ಮಗು ಸಲೀಂನಿಗೆ ಏನೆಲ್ಲಾ ಹೇಳಿದರೂ ಅವನಿಗೆ ತಲೆಬುಡ ಅರ್ಥವಾಗಲಿಲ್ಲ. ಒಂದು ದಿನ ಮನೆಗೆ ಬಂದು, ‘ಇಲ್ಲ ನನ್ನ ಹೆಸರನ್ನು ಬದಲಾಯಿಸಿ, ಇಲ್ಲವಾದರೆ ಇನ್ನು ಮುಂದೆ ನಾನು ಶಾಲೆಗೆ ಹೋಗೂದಿಲ್ಲ’ ಎಂದು ಘೋಷಿಸಿದರು. ಆಗ ಸಲೀಂ ಅಂತ ಇದ್ದ ಹೆಸರು ಯೋಗೇಂದ್ರ ಯಾದವ್ ಎಂದಾಯಿತು.

ಈ ಕುರಿತು ಹಲವು ವೇದಿಕೆಗಳಲ್ಲಿ ಮಾಹಿತಿ ನೀಡಿದ್ದ ಯೋಗೇಂದ್ರ ಯಾದವ್‌ ಅವರು 22 ಮೇ 2023ರಂದು ಜಿಸ್ಟ್‌ ಎಂಬ ಮಾಧ್ಯಮಕ್ಕೆ ಕೂಡ ಈ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದರು.

ಇನ್ನು ಮಣಿವಣ್ಣನ್‌ ಅವರ ಪೂರ್ತಿ ಹೆಸರು ಮಣಿವಣ್ಣನ್‌ ಪೊನ್ನಯ್ಯ ಎಂಬುದಾಗಿದೆಯೇ ಹೊರತು ಅಬ್ದುಲ್‌ ಕಲಾಮ್‌ ಅಲ್ಲ ಎಂಬುದು ಕೂಡ ಸಾಬೀತಾಗಿದೆ. ಈ ಇಬ್ಬರು ಕೂಡ ತಮ್ಮ ತಮ್ಮ ಕಾರ್ಯ ಕ್ಷೇತ್ರ ಹಾಗೂ ಹೋರಾಟದ ಹಾದಿಯಲ್ಲಿ ಪ್ರಾಮಾಣಿಕವಾಗಿರುವುದರಿಂದ ಇವರ ಮೇಲಿನ ದ್ವೇಷಕ್ಕೆ ಸುಳ್ಳು ಹರಡಲಾಗುತ್ತಿದೆ ಅಷ್ಟೆ.


ಇದನ್ನೂ ಓದಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ 


ಈ ವಿಡಿಯೋ ನೋಡಿ : Fact Check: ನೀರು ಕುಡಿದ ಕಾರಣಕ್ಕೆ ದಲಿತ ಹುಡುಗರ ಹಲ್ಲೆ ನಡೆದಿರುವುದು ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಎಂದು ಸಾಭೀತಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *