ಮೋದಿ ನಾಯಕತ್ವವನ್ನು ಮೆಚ್ಚಿ ಪಾಕ್ ಆಕ್ರಮಿತ ಕಾಶ್ಮೀರದ ಜನ ಭಾರತಕ್ಕೆ ಸೇರಲು ಬಯಸಿದ್ದಾರೆ ಎಂಬುದು ಸುಳ್ಳು

Modi

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ಭಾರತವನ್ನು ಸೇರುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ, ಭಾರತದೊಂದಿಗೆ ಒಂದಾಗುವ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಪ್ರತಿಪಾದಿಸಿದ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿದೆ.

ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಈ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಒಂದು ಕಾಲದಲ್ಲಿ ಮೂಲಭೂತವಾದಿಗಳು, ಕಲ್ಲುಗಳು ಮತ್ತು ಬಂದೂಕುಗಳ ಬಗ್ಗೆ ಮಾತನಾಡುತ್ತಿದ್ದವರು ಇಂದು 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಭಾರತವನ್ನು ಗೌರವಿಸಲು ಮತ್ತು ಭಾರತವನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಿದ್ದಾರೆ. ಅಸಾಧ್ಯವಾದುದನ್ನು ಬಿಜೆಪಿ ಸರ್ಕಾರ ಮತ್ತು ಅದರ ಉನ್ನತ ನಾಯಕತ್ವ, ಗೌರವಾನ್ವಿತ ಶ್ರೀ ನರೇಂದ್ರ ಮೋದಿ ಜಿ ಅವರಿಂದ ಸಾಧ್ಯವಾಗಿಸಲಿ!! ಎಂದು ಬರೆದುಕೊಂಡಿದ್ದಾರೆ.“ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ಭಾರತದೊಂದಿಗೆ ಒಂದಾಗಲು ಜನರು ಪ್ರತಿಜ್ಞೆ ಮಾಡುತ್ತಾರೆ. ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿರುವ ದೃಶ್ಯವನ್ನು ನೋಡಿ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : ಈ ವಿಡಿಯೋ ಕಾಶ್ಮೀರದ ಗುಜ್ಜರ್ ಭಗರ್ವಾಲ್ ಸಮುದಾಯದ ಜನರು ಆಗಸ್ಟ್ 15 ರಂದು ಹಿಂದೂಸ್ತಾನದ ಕಾನೂನುಗಳು ಮತ್ತು ಸಂವಿಧಾನವನ್ನು ರಕ್ಷಿಸಲು, ನಮ್ಮ ಸರ್ಕಾರಕ್ಕೆ ಅಗತ್ಯ ಬಿದ್ದಾಗ ದೇಶದ ಗಡಿ ರಕ್ಷಣೆಯಲ್ಲಿ ಸೇನೆಗೆ ಬೆಂಬಲ ನೀಡುತ್ತೇವೆ ಎಂಬ ಪ್ರತಿಜ್ಞೆ ಮಾಡಿದರು ಎಂದು jammu_24x7 ಎಂಬ Instagram ಪೇಜ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಜುಲೈ 26, 2023 ರಂದು, ಪಹಾರಿಗಳು ಮತ್ತು ಕೋಲಿಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಮೇಲ್ಜಾತಿ ಸಮುದಾಯಗಳ ಗುಂಪಿಗೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡುವ ಮಸೂದೆಯನ್ನು ಕೇಂದ್ರವು ಲೋಕಸಭೆಯಲ್ಲಿ ಪರಿಚಯಿಸಿತು. ಇದು ಈ ಪ್ರದೇಶದಲ್ಲಿ ಬುಡಕಟ್ಟು ಗುಜ್ಜರ್ ಮತ್ತು ಬಕರ್ವಾಲ್ ಸಮುದಾಯಗಳಲ್ಲಿ ಪ್ರತಿಭಟನೆಗೆ ಕಾರಣವಾಯಿತು, ಅವರು ಮಸೂದೆಯನ್ನು ಅಸಾಂವಿಧಾನಿಕ ಮತ್ತು ತಮ್ಮ ಹಕ್ಕುಗಳಿಗೆ ಬೆದರಿಕೆ ಎಂದು ಪರಿಗಣಿಸಿದರು. ಈ ಹಿಂದೆ 2021 ರಲ್ಲಿ ಮೇಲ್ಜಾತಿ ಸಮುದಾಯಗಳನ್ನು ಎಸ್ಟಿ ವರ್ಗಕ್ಕೆ ಸೇರಿಸುವ ಮಾತುಕತೆಗಳು ಪ್ರಾರಂಭವಾದಾಗ ಸಮುದಾಯಗಳು ಪ್ರತಿಭಟನೆ ನಡೆಸಿದ್ದವು.

ಭಾರತದ ಜಮ್ಮು ಮತ್ತು ಕಾಶ್ಮೀರದ ಗುಜ್ಜರ್ ಭಗರ್ವಾಲ್ ಬುಡಕಟ್ಟು ಜನರ ಪುಟ X ನಲ್ಲಿ, ‘ಜಮ್ಮು ಮತ್ತು ಕಾಶ್ಮೀರದ ಗುಜ್ಜರ್ ಭಾಗರ್ವಾಲ್‌ಗಳು ತಮ್ಮ ಬುಡಕಟ್ಟು ಸ್ಥಾನಮಾನದ ರಕ್ಷಣೆಗೆ ಸಂಬಂಧಿಸಿದಂತೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಭದ್ರತಾ ಪಡೆಗಳೊಂದಿಗೆ ಶತ್ರುಗಳಿಂದ ದೇಶವನ್ನು ರಕ್ಷಿಸುವ ಪ್ರತಿಜ್ಞೆಯನ್ನು ಅವರು ಆಗಸ್ಟ್ 19 ರಂದು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.ಒಟ್ಟಾರೆಯಾಗಿ ಹೇಳುವುದಾದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ಪ್ರಧಾನಿ ಮೋದಿ ನಾಯಕತ್ವವನ್ನು ಮೆಚ್ಚಿ ಭಾರತಕ್ಕೆ ಸೇರಲು ಪ್ರತಿಜ್ಞೆ ಮಾಡಿದ್ದಾರೆ ಎಂಬುದು ಸುಳ್ಳು. ವಿಡಿಯೋದಲ್ಲಿರುವವರು ಜಮ್ಮು ಮತ್ತು ಕಾಶ್ಮೀರದ ಬುಡಕಟ್ಟು ಜನಾಂಗದ ಗುಜ್ಜರ್ ಭಗರ್ವಾಲ್‌ಗಳು. ತಮ್ಮ ಬುಡಕಟ್ಟು ಸ್ಥಾನಮಾನಕ್ಕೆ ಸಂಬಂಧಿಸಿದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: Fact Check: ಉತ್ತರ ಪ್ರದೇಶದಲ್ಲಿ 21 ಬಿಲಿಯನ್ ವರ್ಷಗಳ ಪ್ರಾಚೀನ ಡ್ರೋನ್ ಸಿಕ್ಕಿದೆ ಎಂಬುದು ಸಂಪೂರ್ಣ ಸುಳ್ಳು


ವಿಡಿಯೋ ನೋಡಿ: Fact Check | ಕನ್ನಡ ಸುದ್ದಿ ಮಾಧ್ಯಮಗಳಿಂದ ಶಾಲಾ ವೇಳಾಪಟ್ಟಿ ಬಗ್ಗೆ ಸುಳ್ಳು ಸುದ್ದಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *