ಬೆಂಗಳೂರಿನ ಕುಂದಲಹಳ್ಳಿ ಬ್ರೂಕ್ಫೀಲ್ಡ್ನ ದಿ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿತ್ತು. ಸಿಲಿಂಡರ್ ಅಥವಾ ಬಾಯ್ಲರ್ ಸ್ಫೋಟ ಆಗಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಬಳಿಕ ಎಫ್ಎಸ್ಎಲ್(FSL) ತಂಡಕ್ಕೆ ಕರೆ ಕಳುಹಿಸಿದರು. ಅವರು ಬಂದು ಸಾಕ್ಷ್ಯಗಳನ್ನು ಕಲೆಹಾಕಿದರು. ಅಲ್ಲಿ ಬ್ಯಾಟರಿ ಮತ್ತು ಇತರೆ ಅವಶೇಷಗಳು ಸಿಕ್ಕಿದ ನಂತರ ಇದು ಬಾಂಬ್ ಸ್ಪೋಟ ಎಂದು ಖಚಿತವಾಗಿದೆ. ಸಧ್ಯ ಈ ಸ್ಫೋಟದ ತನಿಖೆಯನ್ನ NIA ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಇದೀಗ ಬಾಂಬರ್ ಫೋಟೋ ಬಿಡುಗಡೆ ಮಾಡಿದೆ. ಅಲ್ಲದೇ ಈ ಬಾಂಬರ್ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದೆ. ಮತ್ತು ಆರೋಪಿಯನ್ನು ಪತ್ತೆ ಹಚ್ಚುವ ಸಲುವಾಗಿ ತೀವ್ರ ಶೋಧನೆ ನಡೆಸಲಾಗುತ್ತಿದೆ.
ಆದರೆ ಈಗ “ಭಯೋತ್ಪಾಧಕ RSS ಕಾರ್ಯಕರ್ತ ರಾಮಚಂದ್ರ ಕಲ್ಸಂಗ್ರನನ್ನು NIA ಬಂಧಿಸಿದೆ. ಬಂಧಿತ ಭಯೋತ್ಪಾದಕ ಚಕ್ರವರ್ತಿ ಸೂಲಿಬೆಲೆ ಅಪ್ತ ರಾಮಚಂದ್ರ ಕಲಸಂಗ್ರ ರಾಮೇಶ್ವರ ಕೆಫೆ ಸ್ಪೋಟದ ಭಯೋತ್ಪಾದಕ.” ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆರೋಪ ನಿಜವೇ ತಿಳಿಯೋಣ ಬನ್ನಿ.
ಫ್ಯಾಕ್ಟ್ಚೆಕ್: ರಾಮಚಂದ್ರ ಕಲ್ಸಂಗ್ರ 2007 ರ ಸಂಝೌತಾ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದ ಭಯೋತ್ಪಾದಕನಾಗಿದ್ದಾನೆ. ಈತನ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿಗೆ ಎನ್ಐಎ 10 ಲಕ್ಷ ಬಹುಮಾನವನ್ನು ಘೋಷಿಸಿದೆ. ಮತ್ತು ಈತ ಎನ್ಐಎ ಹೊರಡಿಸಿರುವ 2012ರ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದ್ದಾನೆ.2007 ರ ಸಂಝೌತಾ ಎಕ್ಸ್ಪ್ರೆಸ್ ಬಾಂಬ್ ದಾಳಿಯು 18 ಫೆಬ್ರವರಿ 2007 ರಂದು ಮಧ್ಯರಾತ್ರಿಯ ಸುಮಾರಿಗೆ ಸಂಭವಿಸಿದ ಭಯೋತ್ಪಾದಕ ದಾಳಿಯಾಗಿದ್ದು, ಭಾರತದ ದೆಹಲಿ ಮತ್ತು ಪಾಕಿಸ್ತಾನದ ಲಾಹೋರ್ ಅನ್ನು ಸಂಪರ್ಕಿಸುವ ವಾರಕ್ಕೆ ಎರಡು ಬಾರಿ ತಿರುಗುವ ರೈಲು ಸೇವೆಯಾದ ಸಂಝೌತಾ ಎಕ್ಸ್ಪ್ರೆಸ್ನಲ್ಲಿ ಈ ದಾಳಿ ಸಂಭವಿಸಿತು. ಹೊಸದಿಲ್ಲಿಯ ಉತ್ತರಕ್ಕೆ 80 ಕಿಲೋಮೀಟರ್ಗಳ (50 ಮೈಲಿ) ಪಾಣಿಪತ್ ಬಳಿ ರೈಲು ದಿವಾನಾವನ್ನು ದಾಟಿದ ನಂತರ, ಎರಡು ಬೋಗಿಗಳಿಗೆ ಬಾಂಬ್ಗಳನ್ನು ಹಾಕಲಾಯಿತು, ಎರಡೂ ಬೋಗಿಗಳು ಪ್ರಯಾಣಿಕರಿಂದ ತುಂಬಿತ್ತು. ನಂತರದ ಬೆಂಕಿಯಲ್ಲಿ 70 ಜನರು ಸಾವನ್ನಪ್ಪಿದರು ಮತ್ತು ಹತ್ತಾರು ಜನರು ಗಾಯಗೊಂಡರು. 70 ಸಾವುಗಳಲ್ಲಿ, ಹೆಚ್ಚಿನವರು ಪಾಕಿಸ್ತಾನಿ ನಾಗರಿಕರು. ಬಲಿಯಾದವರಲ್ಲಿ ಕೆಲವು ಭಾರತೀಯ ನಾಗರಿಕರು ಮತ್ತು ಮೂವರು ರೈಲ್ವೇ ಪೊಲೀಸರು ಸೇರಿದ್ದಾರೆ.
ಈ ಬಾಂಬ್ ಸ್ಪೋಟದ ಮುಖ್ಯ ಆರೋಪಿಗಳು ಆರ್ಎಸ್ಎಸ್ನ ಕಾರ್ಯಕರ್ತರುಗಳಾದ ಸ್ವಾಮಿ ಅಸೀಮಾನಂದ ಮತ್ತು ಈ ಸ್ಪೋಟದ ರುವಾರಿ ಸುನಿಲ್ ಜೋಶಿ(ಅನುಮಾನಾಸ್ಪದವಾಗಿ ಕೊಲೆಯಾಗಿದ್ದಾರೆ). ಲೋಕೇಶ್ ಶರ್ಮಾ, ಕಮಲ್ ಚೌಹಾಣ್ ಮತ್ತು ರಾಜಿಂದರ್ ಚೌಧರಿ ಸೇರಿದಂತೆ 2007 ರ ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ಪಂಚಕುಲದ ವಿಶೇಷ NIA ನ್ಯಾಯಾಲಯವು ಮಾರ್ಚ್ 20, 2019ರಂದು ಬುಧವಾರದಂದು ಖುಲಾಸೆಗೊಳಿಸಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಈ ವ್ಯಕ್ತಿಗೂ ರಾಮೇಶ್ವರ ಕೆಫೆ ಸ್ಫೋಟಕ್ಕೂ ಮತ್ತು ಬಲಪಂಥೀಯ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೂ ಯಾವುದೇ ಸಂಬಂಧವಿಲ್ಲ.
ಇದನ್ನು ಓದಿ: Fact Check | ಇಂಗ್ಲೀಷ್ ನಾಮಫಲಕ ತೆರವುಗೊಳಿಸಿದ್ದನ್ನು ಕೇಸರಿ ನಾಮಫಲಕ ಎಂದು ಸುಳ್ಳು ಹಂಚಿಕೆ
ವಿಡಿಯೋ ನೋಡಿ: ಬೆಂಗಳೂರಿನಲ್ಲಿ ನಮಾಜ್ ವೇಳೆ ಹನುಮಾನ್ ಚಾಲೀಸ ಹಾಕಿದ್ದಕ್ಕೆ ಹಲ್ಲೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.