Fact Check | ರಾಜಸ್ಥಾನದಲ್ಲಿ ಮುಸ್ಲಿಮರಿಂದ ದಲಿತನ ಹತ್ಯೆ ಎಂಬುದು ಸುಳ್ಳು

ಇತ್ತೀಚೆಗೆ ರಾಜಸ್ತಾನದಲ್ಲಿನ ಲಿಕ್ಕರ್‌ ಮಾಫಿಯಾ ದಲಿತ ವ್ಯಕ್ತಿಯೊಬ್ಬ ಬೇರೊಂದು ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ, ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ  ಸಾಕಷ್ಟು ಮಂದಿ “ರಾಜಸ್ತಾನದಲ್ಲಿ ಮುಸಲ್ಮಾನರು ದಲಿತ ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈ ವಿಡಿಯೋವನ್ನು ಶೇರ್‌ ಮಾಡಿ.” ಎಂದು ಹಂಚಿಕೊಳ್ಳುತ್ತಿದ್ದಾರೆ.

ಈ ವಿಡಿಯೋ ನೋಡಿದ ಸಾಕಷ್ಟು ಮಂದಿಗೆ ವಿಡಿಯೋದಲ್ಲಿನ ಕೊಲೆಗಡುಕರ ವಿಕೃತಿ ಎಂಥಹದ್ದು ಎಂಬುದು ಅರ್ಥವಾಗುತ್ತದೆ. ಆದರೆ ಬಹುತೇಕರಿಗೆ ಈ ಕೊಲೆಗಡುಕರ ಕುರಿತು ಮಾಹಿತಿ ಇಲ್ಲದ ಕಾರಣ, ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಮಾಡಿದವರ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಸುಳ್ಳು ಮಾಹಿತಿ ಬಂದ ಕಾರಣ ಅದನ್ನೆ ನಿಜವೆಂದು ನಂಬಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ವೈರಲ್‌ ವಿಡಿಯೋದ ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶಿಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ವೈರಲ್‌ ವಿಡಿಯೋದ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವೀಡಿಯೊದ ಕುರಿತು ಇನ್ನಷ್ಟು ಮಾಹಿತಿ ಸಂಗ್ರಹಿಸಲು ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವು. ಈ ವಿವಿಧ ಮಾದ್ಯಮಗಳು ಹಾಗೂ ಹಲವು ಪತ್ರಿಕೆಗಳು ಪ್ರಕಟಿಸಿದ್ದ ಕೆಲವೊಂದು ವರದಿಗಳು ಕಂಡು ಬಂದವು.

ಆ ವರದಿಯಲ್ಲಿ ರಾಜಸ್ಥಾನದ ಜುಂಜುನು ಜಿಲ್ಲೆಯಲ್ಲಿ ದಲಿತ ವ್ಯಕ್ತಿಯೊಬ್ಬರು ನಡೆಸುತ್ತಿರುವ ಔಟ್‌ಲೆಟ್‌ನಿಂದ ಮದ್ಯವನ್ನು ಖರೀದಿಸಲಿಲ್ಲ ಎಂಬ ಕಾರಣಕ್ಕೆ ಮದ್ಯದ ಮಾಫಿಯಾದವರು ದಲಿತ ವ್ಯಕ್ತಿ ರಾಮೇಶ್ವರ್ ಎಂಬುವವರು ಮನೆಗೆ ತೆರಳುತ್ತಿದ್ದಾಗ, ಅವರನ್ನು ಆರೋಪಿಗಳು ಅಪಹರಿಸಿ ಏಕಾಂತ ಸ್ಥಳಕ್ಕೆ ಕರೆದೊಯ್ದಿದು, ತಲೆಕೆಳಗಾಗಿ ನೇತು ಹಾಕಿ ಥಳಿಸಿ ಕೊಂದಿದ್ದಾರೆ.” ಎಂದು ಉಲ್ಲೇಖಿಸಲಾಗಿದೆ.

ಇನ್ನು, ಈ ವರದಿಯ ನಂತರದಲ್ಲೂ ದಲಿತ ವ್ಯಕ್ತಿಯನ್ನು ಮುಸ್ಲಿಂ ಸಮುದಾಯದವರು ಹತ್ಯೆ ಮಾಡಿದ್ದಾರೆ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿತ್ತು. ಇದನ್ನು ಗಮನಿಸಿದ ರಾಜಸ್ತಾನದ ಜುಂಜುನು ಪೊಲೀಸರು ಆರೋಪಿಗಳ ಹೆಸರುಗಳು ಮತ್ತು ಜಾತಿಯ ಕುರಿತು ‘X’ ನಲ್ಲಿ  ಒಂದು ಪೋಸ್ಟ್‌ನ ಅಡಿಯಲ್ಲಿ ಕಾಮೆಂಟ್ ಮಾಡಿದ್ದು, ಈ ಕುರಿತು ಹರಡುತ್ತಿದ್ದ ಸುಳ್ಳು ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ.

ಈ ಕಮೆಂಟ್‌ನಲ್ಲಿ  “‘ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಸುಭಾಷ್ ಅಲಿಯಾಸ್ ಚಿಂಟು ಜಾತಿ ಮೇಘವಾಲ್ ಮತ್ತು ಸತೀಶ್ ಅಲಿಯಾಸ್ ಸೀತಾರಾಮ್ ಅಲಿಯಾಸ್ ಸುಖ ಜಾತಿ ಮೇಘವಾಲ್ ಬಲೂಡಾ ನಿವಾಸಿಗಳು ಮತ್ತು ಇತರ ಸಹಚರರಾದ ದೀಪೇಂದ್ರ ಅಲಿಯಾಸ್ ಚಿಂಟು ರಜಪೂತ್, ಪ್ರವೀಣ್ ಕುಮಾರ್ ಅಲಿಯಾಸ್ ಪಿಕೆ ಮೇಘವಾಲ್ ಬಲೂಡಾ ನಿವಾಸಿಗಳು ಮತ್ತು ಪ್ರವೀಣ್ ಅಲಿಯಾಸ್ ಬಾಬಾ ಅಲಿಯಾಸ್. ಉರಿಕಾನನ್ನು ಬಂಧಿಸಲಾಗಿದೆ ಮತ್ತು ಅಪ್ರಾಪ್ತ ವಯಸ್ಕನನ್ನು ಸಹ ಬಂಧಿಸಲಾಗಿದೆ,” ಎಂದು ಜುಂಜುನು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಂಧಿತ ಪ್ರಮುಖ ಆರೋಪಿಗಳು ಮೇಘವಾಲ್ ಜಾತಿಗೆ ಸೇರಿದವರಾಗಿದ್ದು, ಅದನ್ನು ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲಾಗಿದೆ. ಈ ಸಂಬಂಧ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಮತ್ತು ವೈರಲ್ ವೀಡಿಯೊದ ಬಗ್ಗೆ ತಪ್ಪು ಮಾಹಿತಿಯನ್ನು ಹಂಚಿಕೊಳ್ಳದಂತೆ ಜನ ಸಮಾನ್ಯರನ್ನು ಪೊಲೀಸರ್‌ ಎಕ್ಸ್‌ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಒಟ್ಟಾರೆಯಾಗಿ ಹೇಳುವುದಾದರೆ, ಈ ಘಟನೆಯ ಆರೋಪಿಗಳಲ್ಲಿ ಯಾರೂ ಮುಸ್ಲಿಮರಲ್ಲ. ಪೊಲೀಸರ ಪ್ರಕಾರ ಪ್ರಮುಖ ಆರೋಪಿಗಳೂ ದಲಿತರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ


ಇದನ್ನೂ ಓದಿ :  ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ 2000 ರೂ. ಮತ್ತು 5 ಗ್ಯಾರಂಟಿಗಳು ನಿಲ್ಲಲಿವೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *