ಭಾರತದಲ್ಲಿ ಕಳೆದೆರಡು ದಶಕಗಳಿಂದ ಹಿಂದು ಮುಸ್ಲಿಂ ಕಲಹ ತಾರಕಕ್ಕೇರುತ್ತಿದೆ. ಹಿಂದು ಮುಸ್ಲಿಂ ಸಾಮರಸ್ಯ ಬೆಸೆಯಬೇಕಾದ ಅಧಿಕಾರರೂಢ ಸರ್ಕಾರಗಳೇ ಕೋಮುವಾದಕ್ಕೆ ಬೆಂಬಲ ನೀಡುತ್ತಿವೆ. ಪ್ರತಿನಿತ್ಯ ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು, ಆ ಸಮುದಾಯದ ಮೇಲೆ ಜನರಿಗೆ ದ್ವೇಷ ಮೂಡಿಸುವ ಸಲುವಾಗಿ ಅನೇಕ ಸುಳ್ಳುಗಳನ್ನು ಹರಿಬಿಡಲಾಗುತ್ತಿದೆ. ಅಂತಹದ್ದೆ ಒಂದು ಸುಳ್ಳು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
“ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಮುಸ್ಲಿಮರು ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ “ಪಾಕಿಸ್ತಾನ ಜಿಂದಾಬಾದ್” ಎಂದು ಫೋಷಣೆ ಕೂಗಿದ್ದಾರೆ. ಮಾರನೇ ದಿನವೇ ಆ ನಗರದ ಎಲ್ಲಾ ಹಿಂದುಗಳು ಕೇಸರಿ ಧ್ವಜಗಳೊಂದಿಗೆ ಮಸೀದಿಯ ಮುಂದೆ ಜಮಾಯಿಸಿ “ಪಾಕಿಸ್ತಾನ ಜಿಂದಾಬಾದ್ ಎಂದವರು ಪಾಕಿಸ್ತಾನಕ್ಕೆ ಹೋಗಿ, ಇಲ್ಲಿ ಬದುಕಲು ನಿಮಗೆ ಅವಕಾಶವಿಲ್ಲ” ಎಂದು ಪ್ರತಿಭಟಿಸಿದ್ದಾರೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫ್ಯಾಕ್ಟ್ಚೆಕ್: ಇದು 13 ಏಪ್ರಿಲ್ 2019ರಲ್ಲಿ ಗುಲ್ಬರ್ಗದಲ್ಲಿ ನಡೆದ “ರಾಮನವಮಿಯ ಬೃಹತ್ ಶೋಭ ಯಾತ್ರೆ 2019“ರ ಕಾರ್ಯಕ್ರಮದ್ದಾಗಿದೆ. ವಿಡಿಯೋದಲ್ಲಿ ಕನ್ನಡ ಬೋರ್ಡ್ಗಳನ್ನು ನೋಡಬಹುದಾಗಿದೆ. ಆದರೆ ಮೂಲ ವಿಡಿಯೋದಲ್ಲಿ “ಬನಾಯೆಂಗೆ ಮಂದಿರ್” ಎಂಬ ಹಾಡಿಗೆ ಯುವಕರು ಕುಣಿದಿದ್ದಾರೆ.
ಆದರೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋದಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆಯನ್ನು ಕೂಗುತ್ತಾ ಜನರು ಕುಣಿದಿದ್ದಾರೆ. ಇದರ ಮೂಲ ಆಡಿಯೋ ಅಕ್ಟೋಬರ್ 4, 2018 ರಂದು ಮಹಾರಾಷ್ಟ್ರದ ಠಾಣೆಯಲ್ಲಿ ಹಿಂದು ಜಾಗೃತ ಮಂಡಳಿ ನಡೆಸಿದ ಗಣಪತಿ ವಿಸರ್ಜನೆ ಸಂದರ್ಭದ್ದಾಗಿದೆ. ಇನ್ನು ಇದೇ ಆಡಿಯೋ ಬಳಸಿ ಈ ಹಿಂದೆ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪಾಕಿಸ್ತಾನ ವಿರೋಧಿ ಘೋಷಣೆ ಕೂಗಲಾಗಿದೆ ಎಂದು ಹಬ್ಬಿಸಲಾಗಿತ್ತು.
ಹಾಗೆಯೇ ಇದೇ ವಿಡಿಯೋಗೆ ಹರಹರ ಮಹಾದೇವ್ ಎಂಬ ಹಾಡನ್ನು ಸಹ ಸೇರಿಸಿ ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ ಇದು ಮಧ್ಯಪ್ರದೇಶದ ಉಜ್ಜೈನಿಯ ವಿಡಿಯೋವಲ್ಲ ಮತ್ತು ಅಲ್ಲಿನ ಮುಸ್ಲಿಮರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆ ಎಂಬುದು ಕಲ್ಪಿತ ಸುಳ್ಳು.
ಇದನ್ನು ಓದಿ: Fact Check : ಸೋನಿಯಾ ಗಾಂಧಿ ಹಿಂದೂ ವಿರೋಧಿ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿದ್ದಾರೆಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.